ಸಾಗರ : ನಗರಸಭೆ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಸಂಬಂಧ ಸಾಮಾನ್ಯ ಸಭೆಯಲ್ಲಿ ಗದ್ದಲ (Altercation) ಉಂಟಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಸದಸ್ಯರ ನಿಯೋಗ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಭೇಟಿಯಾಗಿ ದೂರು ನೀಡಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಗದ್ದಲ
ನಗರಸಭೆ ನೂತನ ಅಧ್ಯಕ್ಷೆ ಮೈತ್ರಿ ಪಾಟೀಲ್ ಅಧ್ಯಕ್ಷತೆಯಲ್ಲಿ ಇವತ್ತು ಮೊದಲ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಸ್ಥಾಯಿ ಸಮಿತಿಗೆ 11 ಸದಸ್ಯರ ಹೆಸರನ್ನು ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್ ಪ್ರಸ್ತಾಪಿಸಿದರು. ಇದರಿಂದ ಕೆರಳಿದ ವಿಪಕ್ಷ ಕಾಂಗ್ರೆಸ್ನ ಸದಸ್ಯರು, ಸಾಮಾನ್ಯ ಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲ. ಆದ್ದರಿಂದ ಬಹುಮತದ ತೀರ್ಮಾನದಂತೆ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದರು. ಆಗ ಸಭೆಯಲ್ಲಿ ಗದ್ದಲ ಉಂಟಾಯಿತು. ಇದೇ ವೇಳೆ ಅಧ್ಯಕ್ಷೆ ಮೈತ್ರಿ ಪಾಟೀಲ್ 11 ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿ, ಸಭೆಯಿಂದ ಹೊರ ನಡೆದರು.
ಸಿಡಿಮಿಡಿಗೊಂಡ ಕಾಂಗ್ರೆಸ್ ಸದಸ್ಯರು
ಏಕಾಏಕಿ ಸಭೆ ಮುಕ್ತಾಗೊಳಿಸಿದ್ದಾರೆ ಎಂದು ಆರೋಪಿಸಿ ನಗರಸಭೆಯ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಸ್ಥಾಯಿ ಸಮಿತಿಗೆ ಹೆಸರು ಘೋಷಣೆ ಮಾಡಿದ್ದು ಕಾನೂನುಬದ್ಧವಲ್ಲ. ಸಭೆಯನ್ನು ಏಕಾಏಕಿ ರದ್ದುಗೊಳಿಸಿದ್ದು ಸರಿಯಲ್ಲ ಎಂದು ಸಿಟ್ಟಾದರು. ಅಲ್ಲದೆ ಸಭೆಯನ್ನು ಅಸಿಂಧುಗೊಳಿಸಬೇಕು ಎಂದು ಪೌರಾಯುಕ್ತ ಹೆಚ್.ಕೆ.ನಾಗಪ್ಪ ಅವರಿಗೆ ಒತ್ತಾಯಿಸಿದರು. ಆದರೆ ಸ್ಥಾಯಿ ಸಮಿತಿಗೆ ಸದಸ್ಯರನ್ನು ನೇಮಿಸುವುದು ಅಧ್ಯಕ್ಷರ ಪರಮಾಧಿಕಾರ ಎಂದು ಆಯುಕ್ತರು ತಿಳಿಸಿದರು.

ಸರ್ವ ಸದಸ್ಯರ ಅಭಿಪ್ರಾಯ ಪಡೆದು ಸ್ಥಾಯಿ ಸಮಿತಿ ಸದಸ್ಯರನ್ನು ನೇಮಿಸಬೇಕು. ಆದರೆ ಬಹುಮತ ಇಲ್ಲದಿದ್ದರು ಸ್ಥಾಯಿ ಸಮಿತಿ ಸದಸ್ಯರನ್ನು ನೇಮಿಸಿದ್ದಾರೆ. ಊರಿನ ಅಭಿವೃದ್ಧಿಗೆ ಬೆಂಬಲ ನೀಡುತ್ತಿದ್ದೇನೆ. ಆದರೆ ಇವರು ಪಲಾಯನ ರಾಜಕಾರಣ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆ. ಕಾನೂನು ಹೋರಾಟವನ್ನೂ ಮಾಡುತ್ತೇವೆ.
– ಬೇಳೂರು ಗೋಪಾಲಕೃಷ್ಣ, ಶಾಸಕ
ಕಾಂಗ್ರೆಸ್ ನಡೆಗೆ ಬಿಜೆಪಿ ಆಕ್ಷೇಪ
ಇನ್ನು, ಕಾಂಗ್ರೆಸ್ ಪಕ್ಷದ ನಡೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ನಿಯಮಾನುಸಾರ ಆಡಳಿತ ನಡೆಸಲು ಕಾಂಗ್ರೆಸ್ ಸದಸ್ಯರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರೂಲಿಂಗ್ ನೀಡಿ ಸಭಾಂಗಣದಿಂದ ಹೊರ ಬಂದ ಮೇಲೆ ಸಭೆ ಮುಕ್ತಾಯವಾಗಲಿದೆ. ಆ ನಂತರವು ಕಾಂಗ್ರೆಸ್ ಸದಸ್ಯರು ಸಭೆ ನಡೆಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಕಾಂಗ್ರೆಸ್ನವರು ಆಯುಕ್ತರು, ಅಧಿಕಾರಿಗಳನ್ನು ಬೆದರಿಸಿ ನಗರಸಭೆಯನ್ನು ದುರ್ಬಳಕೆ ಮಾಡಿಕೊಳುತ್ತಿರುವುದು ಸರಿಯಲ್ಲ. ಮಹಿಳೆಯರೆ ಅಧ್ಯಕ್ಷರು, ಉಪಾಧ್ಯಕ್ಷರಾಗಿರುವ ಹೊತ್ತಿನಲ್ಲಿ ದಬ್ಬಾಳಿಕೆ ಮಾಡುವ ಮೂಲಕ ಕಾಂಗ್ರೆಸ್ ಮಹಿಳಾ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ.
– ಮೈತ್ರಿ ಪಾಟೀಲ್, ನಗರಸಭೆ ಅಧ್ಯಕ್ಷೆ
ಜಿಲಾಧಿಕಾರಿಗೆ ದೂರು ನೀಡಿದ ನಿಯೋಗ
ಇನ್ನೊ೦ದೆಡೆ, ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯರ ನಿಯೋಗ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಸ್ಥಾಯಿ ಸಮಿತಿ ರಚನೆ ಕುರಿತು ಅಧ್ಯಕ್ಷರು ಕಾನೂನುಬಾಹಿರವಾಗಿ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಕೂಡಲೆ ವಜಾಗೊಳಿಸಬೇಕು. ಅಲ್ಲದೆ ಸಭೆಯಲ್ಲಿ ಹಾಜರಿದ್ದ ಸದಸ್ಯರ ಸಭೆಯನ್ನು ಪುನಃ ಕರೆದು, ಪುರಸಭೆ ಕಾಯ್ದೆ ಅನ್ವಯ ಚುನಾವಣೆ ನಡೆಸಿ, ಸ್ಥಾಯಿ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮಂಡಗಳಲೆ ಗಣಪತಿ, ಲಲಿತಮ್ಮ, ಸಬೀನಾ ಪರ್ವಿನ್, ಶಾಹಿನಾ ಬಾನು, ಮಧು ಮಾಲತಿ, ಕುಸುಮಾ ಸುಬ್ಬಣ್ಣ, ನಾದಿರಾ, ಶಂಕರ್ ಅಳ್ವೆಕೋಡಿ, ಜಾಕಿರ್, ಉಮೇಶ್, ಶಂಕರ್, ಸರಸ್ವತಿ ನಾಗರಾಜ್, ಸುರೇಶ್ ಬಾಬು, ದಿನೇಶ್ ಡಿ ಸೇರಿದ ಹಲವರು ಇದ್ದರು.

ಇದನ್ನೂ ಓದಿ » ಸಿಗಂದೂರು ಲಾಂಚ್, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200