ಶಿವಮೊಗ್ಗ ಲೈವ್.ಕಾಂ | SAGARA NEWS | 23 MARCH 2021
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ವಿಳಂಬ ಮಾಡಿದ ಸಾಗರ ಪೊಲೀಸರಿಗೆ ಹೈಕೋರ್ಟ್ ಚಾಟಿ ಬೀಸಿದೆ. ಹತ್ತು ದಿನದೊಳಗೆ ಕಾರಣ ನೀಡಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ | ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್, ಪೊಲೀಸ್ ಕ್ರಮ ಸರಿಯೋ ತಪ್ಪೋ ಸಂಪುಟದಲ್ಲಿ ಚರ್ಚೆ
ದೂರು ದಾಖಲಾಗಿ ಹತ್ತು ತಿಂಗಳು ಕಳೆದರೂ ಸಾಗರ ಠಾಣೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿಲ್ಲ. ಇದಕ್ಕೆ ಕಾರಣ ನೀಡುವಂತೆ ಸಾಗರ ಠಾಣೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ. ವಕೀಲ ಕೆ.ವಿ.ಪ್ರವೀಣ್ ಕುಮಾರ್ ಅವರು 2020ರ ಮೇ 11ರಂದು ಸೋನಿಯಾ ಗಾಂಧಿ ವಿರುದ್ಧ ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ | ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ಕೇಸ್, ಇನ್ಸ್ಪೆಕ್ಟರ್ ಅಮಾನತಿಗೆ ಶಿವಮೊಗ್ಗದಲ್ಲಿ ಪ್ರೊಟೆಸ್ಟ್
ಸೋನಿಯಾ ಗಾಂಧಿ ವಿರುದ್ಧ ಕೇಸ್ ಏಕೆ?
ಪಿಎಂ ಕೇರ್ ಫ್ರಾಡ್ ಎಂಬ ಶೀರ್ಷಿಕೆ ಅಡಿ 2020ರ ಮೇ 11ರಂದು ಸೋನಿಯಾ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದರು. ಪರಿಹಾರ ನಿಧಿಗೆ ಸಲ್ಲಿಕೆಯಾಗುವ ದೇಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕ ಹಾಗೂ ವಿದೇಶಿ ಪ್ರವಾಸಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿ ಟ್ವೀಟ್ ಮಾಡಲಾಗಿತ್ತು. ಇದರ ವಿರುದ್ಧ ಸಾಗರದ ವಕೀಲ ಪ್ರವೀಣ್ ಕುಮಾರ್ ಅವರು ದೂರು ನೀಡಿದ್ದರು.
24 ಗಂಟೆಯಲ್ಲಿ ಬಿ ರಿಪೋರ್ಟ್
ಸೋನಿಯಾ ಗಾಂಧಿ ಅವರ ವಿರುದ್ಧ ದೂರು ದಾಖಲಾದ ವಿಚಾರ ಸಂಬಂಧ ಮೇ 22ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿತ್ತು. 24 ಗಂಟೆಯಲ್ಲಿ ಬಿ ರಿಪೋರ್ಟ್ ಹಾಕಿಸಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದರು.
ಶಿವಮೊಗ್ಗದಲ್ಲೂ ಗುಡುಗಿದ್ದ ಡಿಕೆಶಿ
ಇತ್ತೀಚೆಗೆ ಶಿವಮೊಗ್ಗ ಚಲೋ ಸಮಾವೇಶದಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಯಾವನೋ ತಗಡು ಕಂಪ್ಲೇಂಟ್ ಕೊಟ್ಟ ಅಂದಾಕ್ಷಣ ಸಾಗರ ಪೊಲೀಸರು ಸೋನಿಯಾ ಗಾಂಧಿ ಅವರ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದರು ಎಂದು ಗುಡುಗಿದ್ದರು.
ಹೈಕೋರ್ಟ್ ಮೊರೆ ಹೋದ ಪ್ರವೀಣ್
ಹತ್ತು ತಿಂಗಳಾದರೂ ಸೋನಿಯಾ ಗಾಂಧಿ ಅವರ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಫೈಲ್ ಮಾಡದ ಹಿನ್ನೆಲೆ, ದೂರುದಾರ, ವಕೀಲ ಪ್ರವೀಣ್ ಕುಮಾರ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಕಾರಣ ತಿಳಿಸುವಂತೆ ಹತ್ತು ದಿನದ ಗಡುವು ನೀಡಲಾಗಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]