ಸಾಗರ: ಕಾರ್ಗಲ್ ವನ್ಯಜೀವಿ ವಲಯದ ಮುಪ್ಪಾನೆ ಬಳಿ ಸಸಿಚೌಕ ಕಳ್ಳಬೇಟೆ ನಿಗ್ರಹ ಶಿಬಿರದಲ್ಲಿ ಭಾನುವಾರ ಚಿರತೆ ಮರಿಯೊಂದು ಮೃತಪಟ್ಟಿದೆ. ತಹಶೀಲ್ದಾರ್ ಡಾ. ಆರ್. ಪ್ರತಿಭಾ ಅವರ ಸಮ್ಮುಖದಲ್ಲಿ ಪಶು ವೈದ್ಯಾಧಿಕಾರಿ ಆಕಾಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅದರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಮುಪ್ಪಾನೆ ಗಸ್ತು ವ್ಯಾಪ್ತಿಯ ಮಂಡವಳ್ಳಿ ಗ್ರಾಮದ ಯೋಗರಾಜ್ ಎಂಬುವವರ ಅಡಿಕೆ ತೋಟದ ಹತ್ತಿರ ಶನಿವಾರ ರಾತ್ರಿ ಈ ಚಿರತೆ ಮರಿ ಗಾಯಗೊಂಡು ಬಿದ್ದಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಹೆಚ್ಚಿನ ಚಿಕಿತ್ಸೆಗಾಗಿ ಸಸಿಚೌಕ ಕಳ್ಳಬೇಟೆ ನಿಗ್ರಹ ಶಿಬಿರಕ್ಕೆ ತಂದು ಚಿಕಿತ್ಸೆ ನೀಡಲು ಆರಂಭಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಮಾರು ನಾಲ್ಕು ತಿಂಗಳು ವಯಸ್ಸಿನ ಚಿರತೆ ಮರಿ ಸಾವನ್ನಪ್ಪಿದೆ.

ಗಾಯಗೊಂಡ ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು.
– ಡಾ. ಪ್ರತಿಭಾ, ಸಾಗರ ತಹಶೀಲ್ದಾರ್
ಮರಿಯ ಬೆನ್ನಿನ ಮೂಳೆ ಹಾಗೂ ಕಾಲುಗಳಿಗೆ ಬಲವಾದ ಪೆಟ್ಟಾಗಿತ್ತು. ಗಾಯದ ನಂಜು ಹೆಚ್ಚಾದ ಕಾರಣ ಅದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ವಲಯ ಅರಣ್ಯಾಧಿಕಾರಿ ಧನಂಜಯ, ಕಂದಾಯ ಅಧಿಕಾರಿ ಬೀರಪ್ಪ ಇದ್ದರು.
