ಸಾಗರ: ಕೇದಾರನಾಥದಿಂದ ಆಗಮಿಸಲಿರುವ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಹಾಗೂ ರುದ್ರಪೂಜೆ ಕಾರ್ಯಕ್ರಮವು ಜುಲೈ 18ರಂದು ಸಂಜೆ 4ರಿಂದ ಸಂಜೆ 7:30ರವರೆಗೆ ಇಲ್ಲಿನ ನೆಹರೂ ಮೈದಾನದಲ್ಲಿರುವ ಬ್ರಾಸಂ ಸಭಾಭವನದಲ್ಲಿ ನಡೆಯಲಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಮುಖರಾದ ಬಿ.ವಿ.ರವೀಂದ್ರನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತಿಹಾಸ ಪ್ರಸಿದ್ಧ ಜ್ಯೋತಿರ್ಲಿಂಗವು ಪ್ರಥಮ ಬಾರಿಗೆ ಸಾಗರಕ್ಕೆ ಆಗಮಿಸುತ್ತಿದ್ದು, ಭಕ್ತರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ಕ್ರಿ.ಶ. 1026ರಲ್ಲಿ ಮಹಮ್ಮದ್ ಘಜ್ನಿ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಸಂದರ್ಭ ಜ್ಯೋತಿರ್ಲಿಂಗವನ್ನು ಧ್ವಂಸಗೊಳಿಸಲಾಗಿತ್ತು ಎನ್ನಲಾಗಿದೆ. ಆ ಸಂದರ್ಭ ಅಗ್ನಿಹೋತ್ರ ವಂಶಸ್ಥರಾದ ಶಾಸ್ತ್ರಿ ಕುಟುಂಬದವರು ಗುಪ್ತವಾಗಿ ಶಿವಲಿಂಗದ ತುಣುಕುಗಳನ್ನು ತಮ್ಮ ಸುಪರ್ದಿಗೆ ಪಡೆದು ರಕ್ಷಿಸಿದ್ದರು. ಇತ್ತೀಚೆಗೆ ಶಾಸ್ತ್ರಿ ಕುಟುಂಬದ ಸೀತಾರಾಮ್ ಶಾಸ್ತ್ರಿ ಅವರು ಈ ಶಿವಲಿಂಗವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿಯವರಿಗೆ ಹಸ್ತಾಂತರಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಜಯಮಾಲ ಮೋಹನ್, ರಮೇಶ್ ಎಂ.ಎಸ್., ಸವಿತಾ ಬದರೀಶ್ ಹಾಗೂ ಶಿವಪ್ರಕಾಶ್ ಉಪಸ್ಥಿತರಿದ್ದರು.