ಶಿಕಾರಿಪುರ: ಜ್ಯೇಷ್ಠ ಅಧಿಕ ಮಾಸದ ಅಂಗವಾಗಿ ಜೂನ್ 13ರಂದು ಪಟ್ಟಣದ ಪ್ರಸಿದ್ಧ ಕ್ಷೇತ್ರ ದೇವತೆ ಶ್ರೀ ಹುಚ್ಚರಾಯಸ್ವಾಮಿ ದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತಾದಿಗಳಿಗೆ ಭಾರಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಪಿಎಂಸಿ ವರ್ತಕ ಕರಿಬಸಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಎಪಿಎಂಸಿ ವರ್ತಕರ ಸಂಘ ಹಾಗೂ ರೈಸ್ ಮಿಲ್ ಮಾಲೀಕರ ಸಂಘದ ಸಹಯೋಗದಲ್ಲಿ ಈ ಬಾರಿ ಸತತ 12ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ದೇವಸ್ಥಾನವನ್ನು ಅಲಂಕರಿಸಲಾಗುತ್ತಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಭಕ್ತರಿಗೆ ಉಪಹಾರ ಹಾಗೂ ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಮೂಲಸೌಕರ್ಯ ಕೊರತೆಗೆ ಅಸಮಾಧಾನ
ಅಧಿಕ ಮಾಸ ಹಾಗೂ ಶ್ರಾವಣ ಮಾಸಗಳಲ್ಲಿ ಶ್ರೀ ಹುಚ್ಚುರಾಯಸ್ವಾಮಿ ದರ್ಶನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ಎ ದರ್ಜೆಯ ದೇವಸ್ಥಾನದಲ್ಲಿ ಭಕ್ತರಿಗೆ ಮೂಲಸೌಕರ್ಯ ಕೊರತೆ ಇದೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಭಕ್ತಾದಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ವರ್ತಕರಾದ ಮಹಾರುದ್ರಪ್ಪ, ಗಜಾನನ, ನಾಗಸ್ವಾಮಿ, ದಯಾನಂದ್, ಕುಮಾರಸ್ವಾಮಿ ಹಿರೇಮಠ, ಚೆನ್ನೇಶ್, ಭರತ್, ಸಿದ್ದಣ್ಣ ಪುನೇದಹಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.