ಶಿಕಾರಿಪುರ: ತಾಲೂಕಿನ ನೆಲವಾಗಿಲು ಕ್ರಾಸ್ ಬಳಿ ಟೆಂಪೋ ಟ್ರಾವೆಲರ್ (ಟಿಟಿ) ವಾಹನ ಪಲ್ಟಿಯಾಗಿ ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಆಷಾಢ ಮಾಸದ ಅಂಗವಾಗಿ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವರ ದರ್ಶನ ಪಡೆಯಲು ಹಾವೇರಿ ಜಿಲ್ಲೆಯ ಹರಳಹಳ್ಳಿ ನಿವಾಸಿಗಳು ಟಿಟಿ ವಾಹನವನ್ನು ಬಾಡಿಗೆಗೆ ಪಡೆದು ಹೊರಟಿದ್ದರು. ಶಿಕಾರಿಪುರದ ನೆಲವಾಗಿಲು ಕ್ರಾಸ್ ಸಮೀಪ ಅಪಘಾತ ಸಂಭವಿಸಿದೆ.

ಹೇಗಾಯ್ತು ಅಪಘಾತ?
ಟಿಟಿ ಚಾಲಕ ನಾಗರಾಜ ಬಾರಕಿ ವಾಹನವನ್ನು ಅತಿವೇಗ ಚಲಾಯಿಸುತ್ತಿದ್ದರು. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರೊಂದನ್ನು ತಪ್ಪಿಸಲು ಹೋಗಿ ಟಿಟಿ ವಾಹನ ಸ್ಕಿಡ್ ಆಗಿ ರಸ್ತೆಗೆ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಪಾರವ್ವ, ಪುಷ್ಪ ಹಾಗೂ ಮಲ್ಲೇಶಪ್ಪ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದಂತೆ ಲಲಿತಾ, ಅವರ ಪತಿ ಶಿವಪ್ಪ, ಮಗ ಸಂದೀಪ್, ರತ್ನಮ್ಮ, ಹೊನ್ನಮ್ಮ, ಮಂಜುನಾಥ್ ಗೌಡ ಹಾಗೂ ಮಲ್ಲನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇವರನ್ನು 108 ಆಂಬುಲೆನ್ಸ್ ಮೂಲಕ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

