ಶಿವಮೊಗ್ಗ: ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿ ಹಾಗೂ ಆತನ ಕುಟುಂಬದವರು ಹಲ್ಲೆ ನಡೆಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ದರ್ಶನ್ ಎಂಬಾತನನ್ನು ವಶಕ್ಕೆ ಪಡೆಯಲು ಠಾಣೆಯ ಸಿಬ್ಬಂದಿ ತೆರಳಿದ್ದರು. ಆತ ಹಾರನಹಳ್ಳಿ ಬಳಿ ಕಾರಿನಲ್ಲಿ ತೆರಳುವುದು ಖಚಿತವಾದ ಹಿನ್ನೆಲೆ ಹೆಡ್ ಕಾನ್ಸ್ಸ್ಟೇಬಲ್ ಸಮೀಉಲ್ಲಾ ಹಾಗೂ ಸಿಬ್ಬಂದಿ ಸಂತೋಷ್ ಅವರು ಸ್ಥಳಕ್ಕೆ ತೆರಳಿದ್ದರು. ದರ್ಶನ್ನನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ ಕಾರಿನಲ್ಲಿದ್ದ ಆತನ ಕುಟುಂಬದವರು ವಿರೋಧಿಸಿದ್ದರು. ಈ ಹಿನ್ನಲೆ ಕುಂಸಿ ಠಾಣೆ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ದರ್ಶನ್ನನ್ನು ಪೊಲೀಸ್ ಜೀಪ್ಗೆ ಹತ್ತಿಸಲು ಮುಂದಾದಾಗ ಆತ ಹೆಡ್ ಕಾನ್ಸ್ಸ್ಟೇಬಲ್ ಸಮೀಉಲ್ಲಾ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಆರೋಪಿಯ ಕುಟುಂಬದವರು ಪೊಲೀಸ್ ಸಿಬ್ಬಂದಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಸಿಬ್ಬಂದಿ ಆಯನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.