ಶಿವಮೊಗ್ಗ: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು (Gold chain theft) ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗ ತಾಲೂಕು ಹಳೆ ಹೊಳೆಹಟ್ಟಿ ಗ್ರಾಮದ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಮದುವೆಗೆ ಹೋಗುತ್ತಿದ್ದ ಮಹಿಳೆ ಟಾರ್ಗೆಟ್
ಹಳೆ ಹೊಳೆಹಟ್ಟಿ ಗ್ರಾಮದ ನಿವಾಸಿ ಅಶ್ವಿನಿ ಎಂಬುವವರು ಮದುವೆ ಸಮಾರಂಭಕ್ಕೆ ಹೋಗಲು ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪಲ್ಸರ್ ಬೈಕಿನಲ್ಲಿ (Pulsar bike) ಬಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಅಶ್ವಿನಿ ಅವರ ಕೊರಳಿನಲ್ಲಿದ್ದ 48 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ. ಸರ ಕಿತ್ತುಕೊಳ್ಳುವ ರಭಸಕ್ಕೆ ಮಹಿಳೆಯ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ (Physical injury). ಕಳ್ಳರನ್ನು ಹಿಡಿಯಲು ಮುಂದಾದಾಗ ಚಾಕು ತೋರಿಸಿ (Knife threat) ಬೆದರಿಸಿ ಪರಾರಿಯಾಗಲು ಯತ್ನಿಸಿದ್ದಾರೆ.

ಬೆನ್ನಟ್ಟಿದ ಗ್ರಾಮಸ್ಥರು, ಸ್ಕಿಡ್ ಆದ ಬೈಕ್
ಕಳ್ಳರು ಪರಾರಿಯಾಗಲು ಯತ್ನಿಸುತ್ತಿದ್ದಂತೆ ಅಶ್ವಿನಿ ಅವರು ರಕ್ಷಣೆಗೆ ಕೂಗಿಕೊಂಡಿದ್ದಾರೆ. ತಕ್ಷಣವೇ ಗ್ರಾಮಸ್ಥರು ಕಳ್ಳರ ಬೈಕನ್ನು ಹಿಂಬಾಲಿಸಿದ್ದಾರೆ (Public chase). ಈ ವೇಳೆ ಕಳ್ಳರ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿಗಳು ಜಮೀನಿನೊಳಗೆ ಓಡಿ ಹೋಗಿದ್ದಾರೆ. ಸಾರ್ವಜನಿಕರು ಇಬ್ಬರನ್ನೂ ಬೆನ್ನಟ್ಟಿ ಹಿಡಿದು ಹಿಗ್ಗಾಮುಗ್ಗಾ ದಂಡಿಸಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಕಳ್ಳರ ಹೆಸರು ಬಹಿರಂಗ
ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಆರೋಪಿಗಳನ್ನು ಹಾಗೂ ಕಳವಾಗಿದ್ದ ಮಾಂಗಲ್ಯ ಸರ ಮತ್ತು ಬೈಕನ್ನು ವಶಕ್ಕೆ (Police custody) ಪಡೆದಿದ್ದಾರೆ. ಮಾಂಗಲ್ಯ ಸರ 48 ಗ್ರಾಂ ತೂಕವಿದ್ದು ಅದರ ಮೌಲ್ಯ ಅಂದಾಜು ₹3,50,000 (Market value) ಎಂದು ಅಂದಾಜಿಸಲಾಗಿದೆ. ಇನ್ನು, ಬಂಧಿತ ಆರೋಪಿಗಳ ಹೆಸರು ನಂದನ್ ಮತ್ತು ಷಣ್ಮುಖ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (FIR registered).
