SHIVAMOGGA LIVE NEWS | 19 JANUARY 2023
SHIMOGA | ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (airport) ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು. ಅಲ್ಲದೆ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಬುಧವಾರ ಸೋಗಾನೆ ವಿಮಾನ ನಿಲ್ದಾಣಕ್ಕೆ (airport) ಯಡಿಯೂರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟರ್ಮಿನಲ್ ಕಾಮಗಾರಿಯನ್ನ ಪರಿಶೀಲಿಸಿದರು. ಬಳಿಕ ವಿಐಪಿ ಎಂಟ್ರಿಯ ಜಾಗ, ರನ್ ವೇ, ಏರ್ ಟ್ರಾಫಿಕ್ ಕಂಟ್ರೋಲ್ ಕಟ್ಟಡ ಮತ್ತು ವಿಮಾನ ನಿಲ್ದಾಣದ ಸುತ್ತು ನಿರ್ಮಿಸಲಾಗಿರುವ ಕಾಂಪೌಂಡ್ ಮತ್ತು ರಸ್ತೆಯನ್ನು ಪರಿಶೀಲಿಸಿದರು.
ಶೇ.3ರಷ್ಟು ಕಾಮಗಾರಿ ಬಾಕಿ
ಕಾಮಗಾರಿ ಪರಿಶೀಲನೆ ಬಳಿಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ‘ವಿಮಾನ ನಿಲ್ದಾಣದ ಶೇ.3ರಷ್ಟು ಕಾಮಗಾರಿ ಬಾಕಿ ಇದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನವದೆಹಲಿಗೆ ತೆರಳಿದ್ದಾಗ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೆ. ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಹ್ವಾನಿಸಿದ್ದೇನೆ’ ಎಂದು ತಿಳಿಸಿದರು.

ದೇಶದಲ್ಲೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಇದಾಗಿದೆ. ಬೆಂಗಳೂರು ಬಳಿಕ ಅತ್ಯಂತ ಸುಸಜ್ಜಿತ ಮತ್ತು ವಿಶೇಷವಾದ ವಿಮಾನ ನಿಲ್ದಾಣ ಇದು. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇದೆ. ಇಂತಹ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದರು.

ಸಣ್ಣ ನ್ಯೂನತೆ ಇದ್ದರು ಅನುಮತಿ ಸಿಗಲ್ಲ
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಇಚ್ಛಾಶಕ್ತಿ ಇದ್ದರೆ ಏನನ್ನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯೇ ಸಾಕ್ಷಿ. ಒಂದೇ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಪುನಾರಂಭವಾಗಿ ಮುಕ್ತಾಯವಾಗಿದೆ’ ಎಂದರು.

‘ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಧಿಕಾರಿಗಳು ಪರಿಶೀಲನೆ ನಡೆಸಿ, ಎಲ್ಲವು ಸರಿ ಇದ್ದರೆ ಮಾತ್ರ ವಿಮಾನ ಹಾರಾಟಕ್ಕೆ ಅನುಮತಿ ನೀಡುತ್ತಾರೆ. ಒಮ್ಮೆ ಅಧಿಕಾರಿಗಳನ್ನು ಅನೌಪಚಾರಿಕವಾಗಿ ಕರೆಯಿಸಿಕೊಂಡು ಅವರಿಂದ ಮಾರ್ಗದರ್ಶನ ಪಡೆದಿದ್ದೇವೆ. ನಮಗೆ ಸಲಹೆ ನೀಡಲು ಬ್ರಿಗೇಡಿಯರ್ ಪೂರ್ವಿಮಠ್ ಎಂಬುವವರನ್ನು ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗದ ಈ ಬ್ರ್ಯಾಂಡ್ ಭಾರಿ ಫೇಮಸ್, ವಿದೇಶಕ್ಕು ತಲುಪುತ್ತಿದೆ ಮಲೆನಾಡ ಟೇಸ್ಟ್, MN ಪಿಕಲ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಪ್ರಮುಖರಾದ ಎಸ್.ದತ್ತಾತ್ರಿ, ಜ್ಯೋತಿಪ್ರಕಾಶ್, ಧರ್ಮಪ್ರಸಾದ್, ಬಳ್ಳೆಕೆರೆ ಸಂತೋಷ್ ಸೇರಿದಂತೆ ಹಲವರು ಇದ್ದರು.

CLICK HERE TO JOIN SHIVAMOGGA LIVE WHATSAPP GROUP