ಆನವಟ್ಟಿ: ಏತ ನೀರಾವರಿ ಯೋಜನೆಯ ಸಮರ್ಪಕ ಅನುಷ್ಠಾನ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸೊರಬ ತಾಲೂಕು ಹಂಚಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಂಚಿ, ಕುಣಿತೆಪ್ಪ, ಭಾರಂಗಿ ಹಾಗೂ ಗುಡ್ಡದ ಬೆಣ್ಣೆಗೆರೆ ಗ್ರಾಮಗಳಲ್ಲಿ ತಲಾ ₹50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಸೇರಿದಂತೆ ಒಟ್ಟು ₹4 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಏತ ನೀರಾವರಿ ವಿಳಂಬಕ್ಕೆ ಅಸಮಾಧಾನ
ಏತ ನೀರಾವರಿ ಯೋಜನೆಯಡಿ ಕೆಲವು ಕೆರೆಗಳಿಗೆ ನೀರು ತಲುಪುತ್ತಿಲ್ಲ ಎಂಬ ಗ್ರಾಮಸ್ಥರ ದೂರು ಆಲಿಸಿದ ಸಚಿವರು, ‘ಮಳೆಗಾಲದಲ್ಲಿ ಪೈಪ್ಲೈನ್ಗಳು ಒಡೆದು ಹೋಗಿರುವುದು ಸಮಸ್ಯೆಗೆ ಕಾರಣವಾಗಿದೆ. ಈ ಕುರಿತು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಯಬೇಕು. ಸಕಾಲಕ್ಕೆ ಪೈಪ್ಲೈನ್ಗಳ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕುʼ ಎಂದು ಸೂಚನೆ ನೀಡಿದರು.
ಮಿನಿಸ್ಟರ್ ಏನೆಲ್ಲ ಹೇಳಿದರು?
- ತಾವು ಜನರ ಜೊತೆಗೆ ಪಾದಯಾತ್ರೆ ಹಾಗೂ ಹೋರಾಟ ಮಾಡಿದ ಫಲವಾಗಿ ನೀರಾವರಿ ಯೋಜನೆಗಳಿಗೆ ₹1,850 ಕೋಟಿ ಅನುದಾನ ತರಲು ಸಾಧ್ಯವಾಗಿದೆ. ಈ ಯೋಜನೆಯ ಲಾಭ ಪ್ರತಿ ಮನೆಗೂ ತಲುಪಬೇಕು.
- ಹಿರೇಮಾಗಡಿಯಿಂದ ಹಂಚಿ ತಾಂಡಾದವರೆಗಿನ ರಸ್ತೆ ಹಾಗೂ ಕುಂತೇಪ್ಪ ಮುಖ್ಯ ರಸ್ತೆಗಳಿಗೆ ಶೀಘ್ರವೇ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು.
ತಳಹಂತದ ಜನರ ಜೀವನ ಸುಧಾರಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿದೆ. ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಉಚಿತ ವಿದ್ಯುತ್ ನೀಡುವ ಮೂಲಕ ರೈತರ ಬಾಳಲ್ಲಿ ಬೆಳಕು ತಂದಿದ್ದರು. ಅದೇ ಹಾದಿಯಲ್ಲಿ ನಾವು ಜನರ ಸೇವೆಗೆ ಶಕ್ತಿ ಮೀರಿ ಶ್ರಮಿಸುತ್ತೇವೆ.
– ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಇನ್ನು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮೇ ಮತ್ತು ಜೂನ್ ತಿಂಗಳಲ್ಲಿ ವಿಶೇಷ ಅನುದಾನ ಒದಗಿಸುವಂತೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ. ರುದ್ರಗೌಡ ಸಚಿವರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸದಾನಂದ ಗೌಡ ಬಿಳಗಲಿ, ಶಿವಲಿಂಗೇಗೌಡ, ಗಣಪತಿ ಹುಲ್ತಿಕೊಪ್ಪ, ಎಂ.ಡಿ. ಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
