ತೀರ್ಥಹಳ್ಳಿ: ತಾಲೂಕಿನ ಲಿಂಗಾಪುರ ಗ್ರಾಮದ ಸೌತೆಮಕ್ಕಿಯಲ್ಲಿ ಕುಟುಂಬದವರು ಒಳಗೆ ಮಲಗಿದ್ದಾಗಲೇ ಮನೆಯೊಂದರ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆಸಿದೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಗ್ರಾಮದ ರೈತ ರಾಮದಾಸ್ ಕೆ.ಪಿ. ಎಂಬುವವರ ಮನೆಯಲ್ಲಿ ಕೃತ್ಯ ನಡೆದಿದೆ. ರಾಮದಾಸ್, ಅವರ ಪತ್ನಿ ಹಾಗೂ ಸಂಬಂಧಿ ಮುಕುಂದ ಎಂಬುವವರು ರಾತ್ರಿ ಊಟ ಮುಗಿಸಿ ಮನೆಯೊಳಗೆ ಮಲಗಿದ್ದರು. ಜೂನ್ 18ರ ತಡರಾತ್ರಿ ಬಂದ ಕಳ್ಳರು, ಮನೆಯ ಮುಂದೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಒಡೆದು ಹಾಕಿದ್ದಾರೆ. ಬಳಿಕ ಮನೆಯ ಹಿಂಬಾಗಿಲಿನ ಚಿಲಕ ಹಾಕಿ, ಆಯುಧದಿಂದ ಮುಂಭಾಗದ ಬಾಗಿಲನ್ನು ಒಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಬಾಗಿಲು ಜಖಂಗೊಂಡಿರುವುದು ಹಾಗೂ ಸಿಸಿಟಿವಿ ಕ್ಯಾಮೆರಾ ಹಾಳಾಗಿರುವುದು ಬೆಳಕಿಗೆ ಬಂದಿದೆ. ಬಾಗಿಲು ಒಡೆಯಲು ಸಾಧ್ಯವಾಗದ ಕಾರಣ ಕಳ್ಳತನ ಯತ್ನ ವಿಫಲವಾಗಿದೆ. ಈ ಕುರಿತು ರಾಮದಾಸ್ ಅವರು ದೂರು ನೀಡಿದ್ದಾರೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
