ತೀರ್ಥಹಳ್ಳಿ: ಗಡಿಕಲ್ಲು ಸರ್ಕಲ್ ಬಳಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನಗಳನ್ನು ಕಾರಿನಲ್ಲಿ ಬಂದ ಕಳ್ಳರು ಅಪಹರಿಸಲು ಯತ್ನಿಸಿದ ಘಟನೆಗೆ ಸಂಬಂಧಿಸಿದ ತೀರ್ಥಹಳ್ಳಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾತ್ರಿ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದನಗಳನ್ನು ಹಿಡಿದು ವಾಹನಕ್ಕೆ ತುಂಬಿಸಿಕೊಳ್ಳಲು ಯತ್ನಿಸುತ್ತಿದ್ದ ದೃಶ್ಯವು ಅದೇ ಮಾರ್ಗವಾಗಿ ಬಂದ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿತ್ತು. ಈ ವಿಡಿಯೋ ಆಧರಿಸಿ ಗಸ್ತುನಿರತ ಹೆಡ್ ಕಾನ್ಸ್ಟೇಬಲ್ ಗಿರಿಧರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ವಯಂಪ್ರೇರಿತವಾಗಿ ಕಳ್ಳತನ ಯತ್ನ ಪ್ರಕರಣ ದಾಖಲಿಸಿದ್ದಾರೆ.

ಜೂನ್ 10ರಂದು ರಾತ್ರಿ 12.50ರ ಹೊತ್ತಿಗೆ ತೀರ್ಥಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಈ ಕೃತ್ಯ ನಡೆದಿದೆ. ದುಷ್ಕರ್ಮಿಗಳು ದನಗಳನ್ನು ಕಾರಿಗೆ ತುಂಬಿಸುತ್ತಿದ್ದಾಗ, ಹಿಂಬದಿಯಿಂದ ಮತ್ತೊಂದು ಕಾರು ಬಂದಿದೆ. ಇದರಿಂದ ಹೆದರಿದ ಕಳ್ಳರು ದನಗಳನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದಾರೆ.
