ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಹೋಬಳಿಯ ಹೊನ್ನೆತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಬಳ ಸಮೀಪ ಉಕ್ಕಿ ಹರಿಯುತ್ತಿದ್ದ ಮಾಲತಿ ಹೊಳೆಯ ಪ್ರವಾಹದಲ್ಲಿ ಸಿಲುಕಿದ್ದ ಹೊನ್ನಾವರ ಮೂಲದ ಕುಟುಂಬವನ್ನು ಸ್ಥಳೀಯರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ನಾಬಳ – ಬಿದರಗೋಡು ಮಾರ್ಗವಾಗಿ ಶೃಂಗೇರಿಗೆ ತೆರಳುತ್ತಿದ್ದ ಕಾರು, ದಿಢೀರ್ ಹೆಚ್ಚಾದ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತು. ಕಾರಿನೊಳಗೆ ನೀರು ನುಗ್ಗಿ ಮುಂದೆ ಸಾಗಲು ಸಾಧ್ಯವಾಗದೆ ಕಂಗೆಟ್ಟ ಕುಟುಂಬಸ್ಥರು ಜೀವಭಯದಿಂದ ಕಾರಿನ ಮೇಲ್ಛಾವಣಿ ಹತ್ತಿ ನಿಂತು ಪರದಾಡಿದರು.

ಇದನ್ನು ಗಮನಿಸಿದ ಸ್ಥಳೀಯರಾದ ಪ್ರವೀಣ್, ಮಂಜುನಾಥ್ ಹಾಗೂ ಇತರರು ಕೂಡಲೇ ಧಾವಿಸಿ, ಕಾರಿನಲ್ಲಿದ್ದ ಬಾಲಕನೊಬ್ಬನನ್ನು ಸುರಕ್ಷಿತವಾಗಿ ದಡಕ್ಕೆ ತಂದರು. ಬಳಿಕ ಕಾರಿಗೆ ಹಗ್ಗ ಕಟ್ಟಿ, ಸ್ಥಳೀಯರ ಸಹಾಯದಿಂದ ಎಳೆದು ಕಾರಿನಲ್ಲಿದ್ದ ಎಲ್ಲರನ್ನೂ ರಕ್ಷಿಸುವ ಮೂಲಕ ದೊಡ್ಡ ಅನಾಹುತ ತಪ್ಪಿಸಿದರು. ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು.
ಸೇತುವೆ ಮೇಲೆ ಸಂಚಾರ ಬಂದ್
ತುಂಗಾ ನದಿಯ ಉಪನದಿಯಾದ ಮಾಲತಿ ಹೊಳೆ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆ ನಾಬಳ ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ಭಾಗದಲ್ಲಿ ಮಳೆ ಮುಂದುವರಿದಿದ್ದು, ನದಿ-ಹೊಳೆಗಳ ನೀರಿನ ಮಟ್ಟ ಹೆಚ್ಚಾಗಿದೆ.