ತೀರ್ಥಹಳ್ಳಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 19ರಂದು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಸಿದ್ಧತೆ ಮತ್ತು ಭದ್ರತೆ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸಿಎಂ ಭೇಟಿ ಹಿನ್ನೆಲೆ ಬಾಳೇಬೈಲು ಪ್ರಥಮ ದರ್ಜೆ ಕಾಲೇಜು, ರಾಮೇಶ್ವರ ದೇವಸ್ಥಾನ, ಜೂನಿಯರ್ ಕಾಲೇಜು ಮೈದಾನಕ್ಕೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಸ್ಥಳ ಪರಿಶೀಲನೆ ನಡೆಸಿದರು.

ತೀರ್ಥಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ 10 ಸಾವಿರ ಜನ ಸೇರಬಹುದಾದ ಬೃಹತ್ ಪೆಂಡಾಲ್ ನಿರ್ಮಾಣವಾಗುತ್ತಿದೆ. ಇದರ ಪರಿಶೀಲನೆ ನಡೆಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೆಲವು ಸೂಚನೆಗಳನ್ನು ನೀಡಿದರು. ಇನ್ನು, ಸಿಎಂ ಭೇಟಿ ನೀಡಬಹುದಾದ ಸ್ಥಳಗಳನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳ ಸ್ವಚ್ಛತೆ, ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ.
ಕಸ್ತೂರಿ ರಂಗನ್ ವರದಿ ಸಂಬಂಧಿಸಿದ ಚರ್ಚೆಗೆ ಸಂಸದರು, ಶಾಸಕರು ಮತ್ತು ಮಾಜಿ ಶಾಸಕರಿಗೆ ಆಹ್ವಾನಿಸಲಾಗಿದೆ.
– ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ
ಬಂದೋಬಸ್ತ್ಗಾಗಿ ಇಬ್ಬರು ಎಸ್ಪಿ, ಐವರು ಡಿವೈಎಸ್ಪಿ, 28 ಇನ್ಸ್ಪೆಕ್ಟರ್, 750 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
– ಬಿ.ನಿಖಿಲ್, ಜಿಲ್ಲಾ ರಕ್ಷಣಾಧಿಕಾರಿ
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್. ಶೆಟ್ಟಿ, ಮುಖಂಡರಾದ ಆರ್. ಪ್ರಸನ್ನ ಕುಮಾರ್, ಕೆಸ್ತೂರು ಮಂಜುನಾಥ, ಮುಡುಬ ರಾಘವೇಂದ್ರ, ಆದರ್ಶ ಹುಂಚದಕಟ್ಟೆ, ಡಿಎಫ್ಒ ಅಜ್ಜಯ್ಯ ಜಿ.ಆರ್., ಉಪವಿಭಾಗಾಧಿಕಾರಿ ಮೈತ್ರಿ ಎಚ್.ಪಿ., ತಹಶೀಲ್ದಾರ್ ಎಸ್.ರಂಜಿತ್ ಇದ್ದರು.
ಸಿಎಂ ಭೇಟಿ ಎಷ್ಟೊತ್ತಿಗೆ?
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೆ.19ರಂದು ಬೆಳಿಗ್ಗೆ 10 ಗಂಟೆಗೆ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಯ ಮೈದಾನದ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಬಳಿಕ ಕಸ್ತೂರಿ ರಂಗನ್ ವರದಿ ಸಂಬಂಧ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಧ್ಯಾಹ್ನ 12:30ಕ್ಕೆ ಹೆಲಿಕಾಪ್ಟರ್ ಮೂಲಕ ತೀರ್ಥಹಳ್ಳಿಯಿಂದ ಬಾಳೆಹೊನ್ನೂರಿಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಶ್ರೀಧರ್ ತಿಳಿಸಿದ್ದಾರೆ.