ತೀರ್ಥಹಳ್ಳಿ: ಕನ್ನಡ ಚಲನಚಿತ್ರ ಹಾಗೂ ಕಿರುತೆರೆ ಧಾರವಾಹಿಗಳ ಸಂಭಾಷಣೆಕಾರ ಮತ್ತು ಲೇಖಕ ಟಿ.ಜಿ. ನಂದೀಶ್ (37) ಹೃದಯಾಘಾತದಿಂದ (Sudden Cardiac Arrest) ನಿಧನರಾಗಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದ ನಂದೀಶ್ ಅವರಿಗೆ ಮನೆಯಲ್ಲಿಯೇ ಹೃದಯಾಘಾತವಾಗಿದೆ. ಅಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಯಾರು ಈ ನಂದೀಶ್?
ನಂದೀಶ್ ಅವರು ಕನ್ನಡದ ಸಿನಿಮಾ ಮತ್ತು ಧಾರವಾಹಿಗಳ ಸಂಭಾಷಣೆಕಾರರಾಗಿದ್ದರು. ತೀರ್ಥಹಳ್ಳಿಯ ಮಾಳೂರಿನಲ್ಲಿ ನೆಲೆಸಿದ್ದ ಅವರು ಇಲ್ಲಿಂದಲೇ ತಮ್ಮ ವೃತ್ತಿ ಮುಂದುವರೆಸಿದ್ದರು.
- ತೀರ್ಥಹಳ್ಳಿ ತಾಲೂಕಿನ ಮಾಳೂರಿನವರಾದ ನಂದೀಶ್ ಅವರು ಚಿತ್ರರಂಗದ ಪ್ರಸಿದ್ಧ ‘ಚಿತ್ತಾರ’ ಪತ್ರಿಕೆಯಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು.
- ಒಂದಂಕೆ ಕಾಡು, ದೂರದರ್ಶನ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.
- ಪಾರು, ರಾಧಾ ಕಲ್ಯಾಣ ಸೇರಿದಂತೆ ಅನೇಕ ಧಾರಾವಾಹಿಗಳಿಗೆ ಕೆಲಸ ಮಾಡಿದ್ದರು.
- ಇತ್ತೀಚೆಗೆ ನಿಧನರಾದ ನಟ, ನಿರ್ಮಾಪಕ ದಿಲೀಪ್ ರಾಜ್ ಅವರೊಂದಿಗು ಕೆಲಸ ಮಾಡಿದ್ದರು. ದಿಲೀಪ್ ರಾಜ್ ನಿಧನರಾದಾಗ ಅವರು ಕುರಿತು ನಂದೀಶ್ ಅವರು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ನಂದೀಶ್ ಅವರ ನಿಧನದ ವಿಷಯ ತಿಳಿದು ಚಿತ್ರರಂಗ ಮತ್ತು ಕಿರುತೆರೆಯ ಹಲವರು ಸಂತಾಪ ಸೂಚಿಸಿದ್ದಾರೆ. ನಂದೀಶ್ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ತೀರ್ಥಹಳ್ಳಿ ತಾಲೂಕು ಮಾಳೂರಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಇಂದು ಮಧ್ಯಾಹ್ನ 12:30ಕ್ಕೆ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ತಾಯಿ, ಪತ್ನಿ , ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇದನ್ನೂ ಓದಿ:➤ ತೀರ್ಥಹಳ್ಳಿಯ ಅನಘಾ ಈಗ ರಾಜ್ಯಕ್ಕೆ ಫಸ್ಟ್
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
