ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿಗಳಿಗೆ ಸಿಗಲಿಲ್ಲ ಪೂರ್ಣಾವಧಿ ಅಧಿಕಾರ, ಯಾರೆಲ್ಲ ಎಷ್ಟು ದಿನ ಅಧಿಕಾರದಲ್ಲಿದ್ದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಜುಲೈ 2021

ಅಧಿಕ ಸಂಖ್ಯೆಯ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದ ಹೆಮ್ಮೆ ಶಿವಮೊಗ್ಗ ಜಿಲ್ಲೆಯದ್ದು. ಆದರೆ ಈ ಜಿಲ್ಲೆಯಿಂದ ಆಯ್ಕೆಯಾಗಿ ಹೋಗಿ, ಸಿಎಂ ಆದವರು ಪೂರ್ಣಾವಧಿ ಅಧಿಕಾರ ನಡೆಸಲು ಆಗಲಿಲ್ಲ. ಇವತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮತ್ತೊಮ್ಮೆ ಅರ್ಧಕ್ಕೆ ಸಿಎಂ ಸ್ಥಾನ ಮೊಟಕಾದಂತಾಗಿದೆ.

73 ದಿನಕ್ಕಷ್ಟೆ ಸಿಎಂ

ಮೈಸೂರು ರಾಜ್ಯವಾಗಿದ್ದ ಸಂದರ್ಭ, ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಡಿದಾಳು ಮಂಜಪ್ಪ ಅವರು ಮುಖ್ಯಮಂತ್ರಿ ಗಾದಿಗೆ ಏರಿದರು. 1956ರ ಆಗಸ್ಟ್ 19ರಂದು ಸಿಎಂ ಪದವಿಗೇರಿದ ಕಡಿದಾಳ್ ಮಂಜಪ್ಪ ಅವರು 1956ರ ಅಕ್ಟೋಬರ್ 31ಕ್ಕೆ ಅಧಿಕಾರ ಕಳೆದುಕೊಂಡರು. ಕೇವಲ 73 ದಿನ ಸಿಎಂ ಆಗಿದ್ದರು.

ಬಂಗಾರಪ್ಪಗೆ ಪೂರ್ಣಾವಧಿ ಅಧಿಕಾರ ಸಿಗಲಿಲ್ಲ

ಸೊರಬ ಶಾಸಕರಾಗಿದ್ದ ಎಸ್‍.ಬಂಗಾರಪ್ಪ ಅವರು 1990ರ ಅಕ್ಟೋಬರ್ 17ರಂದು ಮುಖ್ಯಮಂತ್ರಿಯಾದರು. 1992ರ ನವೆಂಬರ್ 19ರಂದು ರಾಜೀನಾಮೆ ಸಲ್ಲಿಸಿದರು. 2 ವರ್ಷ 33 ದಿನಗಳಷ್ಟೆ ಬಂಗಾರಪ್ಪ ಅವರು ಸಿಎಂ ಗಾದಿಯಲ್ಲಿದ್ದರು. ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ ಬಂಗಾರಪ್ಪ ಅವರು ಅಧಿಕಾರ ತ್ಯಜಿಸಬೇಕಾಯಿತು. ನಿಧನರಾಗುವ ಸ್ವಲ್ಪ ದಿನ ಮುಂಚೆ, ಹಗರಣದ ಆರೋಪದಿಂದ ಬಂಗಾರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.

201910078 1160313744448534 8497670934895384150 n.jpg? nc cat=105&ccb=1 3& nc sid=730e14& nc ohc=sHo9IUZf8icAX 5M4v0&tn=XgSJ3kUX1No5RJvs& nc ht=scontent.fblr20 1

ಜೆ.ಹೆಚ್.ಪಾಟೇಲ್‍ ಅವರಿಗೂ ಸಿಗಲಿಲ್ಲ ಪೂರ್ಣಾವಧಿ

ವರ್ಣರಂಜಿತ ರಾಜಕಾರಣಿ ಅನಿಸಿಕೊಂಡಿದ್ದ ಜೆ.ಹೆಚ್.ಪಟೇಲ್ ಅವರು ಚನ್ನಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರು. ಆಗಿನ್ನೂ ಚನ್ನಗಿರಿ ತಾಲೂಕು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. 1996ರ ಮೇ 31ರಂದು ಜೆ.ಹೆಚ್.ಪಟೇಲ್ ಅವರು ಸಿಎಂ ಆಗಿ ಅಧಿಕಾರ ಆರಂಭಿಸಿದರು. 3 ವರ್ಷ 129 ದಿನ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್.ಪಟೇಲ್ ಅವರು 7 ಅಕ್ಟೋಬರ್ 1999ರಂದು ಪದತ್ಯಾಗ ಮಾಡಬೇಕಾಯಿತು.

ನಾಲ್ಕು ಬಾರಿ ಸಿಎಂ ಗಾದಿಗೇರಿದ್ದರು ಯಡಿಯೂರಪ್ಪ

ಅತ್ಯಧಿಕ ಭಾರಿ ಸಿಎಂ ಗದ್ದುಗೆ ಮೇಲೆ ಕುಳಿತ ಹಿರಿಮೆ ಬಿ.ಎಸ್.ಯಡಿಯೂರಪ್ಪ ಅವರದ್ದು. 2007ರ ನವೆಂಬರ್ 12ರಿಂದ 2007ರ ನವೆಂಬರ್ 19ರವರೆಗೆ ಏಳು ದಿನ ಸಿಎಂ ಆಗಿದ್ದರು. ಜೆಡಿಎಸ್‍ ಪಕ್ಷ ಬೆಂಬಲ ಹಿಂಪಡೆದಿದ್ದರಿಂದ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡಿದ್ದರು.

2008ರಲ್ಲಿ ಬಿಜೆಪಿಗೆ ಬಹುಮತ ಲಭಿಸಿ, ಯಡಿಯೂರಪ್ಪ ಅವರು ಸಿಎಂ ಆದರು. 2008ರ ಮೇ 30ರಿಂದ ಮೂರು ವರ್ಷ 66 ದಿನ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದರು. ಆದರೆ ಭ್ರಷ್ಟಾಚಾರ ಆರೋಪ ಸಂಬಂಧ 2011ರ ಆಗಸ್ಟ್ 4ರಂದು ರಾಜೀನಾಮೆ ಸಲ್ಲಿಸಬೇಕಾಯಿತು.

2018ರ ಮೇ 17ರಂದು ಮತ್ತೆ ಸಿಎಂ ಆದ ಯಡಿಯೂರಪ್ಪ ಅವರು ಬಹುಮತ ಇಲ್ಲದೆ ಆರು ದಿನದಲ್ಲಿ, ಅಂದರೆ, 2018ರ ಮೇ 23ರಂದು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ಬಳಿಕ 2019ರ ಜುಲೈ 26ರಂದು ಮತ್ತೆ ಅಧಿಕಾರಕ್ಕೇರಿದ ಯಡಿಯೂರಪ್ಪ ಅವರು 2021ರ ಜುಲೈ 26ರಂದು ಪದತ್ಯಾಗ ಮಾಡಬೇಕಾಯಿತು.

ಈ ಮೂಲಕ ರಾಜ್ಯಕ್ಕೆ ಅತ್ಯಧಿಕ ಸಿಎಂಗಳನ್ನು ಕೊಟ್ಟರೂ, ಶಿವಮೊಗ್ಗ ಜಿಲ್ಲೆಯವರು ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗಿಲ್ಲ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment