SHIVAMOGGA LIVE NEWS | 26 SEPTEMBER 2023
SHIMOGA : ಸರ್ಕಾರದ ಮೊದಲ ಜನತಾ ದರ್ಶನಕ್ಕೆ (Janata Darshana) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯ ಜನರು ಅಹವಾಲು ಸಲ್ಲಿಸಿದ್ದಾರೆ. ಸಚಿವರೊಂದಿಗೆ ಖುದ್ದು ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಜನರು ಮನವಿ ಮಾಡಿದರು. ಮೊದಲ ಜನತಾ ದರ್ಶನದ ಪ್ರಮುಖ ಆರು ಫಟಾಫಟ್ ಅಪ್ಡೇಟ್ ಇಲ್ಲಿದೆ.
ವೇದಿಕೆಯಿಂದ ಕೆಳಗಿಳಿದು ಅಹವಾಲು ಸ್ವೀಕಾರ
ಜನತಾ ದರ್ಶನದಲ್ಲಿ (Janata Darshana) ಅಹವಾಲು ಸಲ್ಲಿಸಲು ವಿಶೇಷ ಚೇತನರು ಆಗಮಿಸಿದ್ದರು. ಇದನ್ನು ಗಮನಿಸಿದ ಸಚಿವ ಮಧು ಬಂಗಾರಪ್ಪ ವಿಶೇಷ ಚೇತನರು ವೇದಿಕೆ ಹತ್ತುವುದು ಕಷ್ಟವಾಗಲಿದೆ. ನಾನೇ ಅಲ್ಲಿಗೆ ಬರುತ್ತೇನೆ ಎಂದು ಕೆಳಗಿಳಿದು ಬಂದು ಸಮಸ್ಯೆ ಆಲಿಸಿದರು. ಇನ್ನು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇದನ್ನು ಗಮನಿಸಿ ಮಹಿಳೆಯರಿಗೆ ಮೊದಲ ಆದ್ಯತೆ ಎಂದು ತಿಳಿಸಿದರು. ಅರ್ಜಿ ಹಿಡಿದು ಬರುವ ಮಹಿಳೆಯರನ್ನು ಮೊದಲು ಮುಂದೆ ಬಿಡಿ ಎಂದು ಪೊಲೀಸರಿಗೆ ಸೂಚಿಸಿದರು. ಅದರಂತೆ ಮಹಿಳೆಯರ ಮನವಿಗಳನ್ನು ಮೊದಲು ಪಡೆಯಲಾಯಿತು.
ಸ್ಥಳದಲ್ಲೇ ಪರಿಹಾರದ ಭರವಸೆ
ಬೀದಿ ಬದಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ಪಿಎಂ ಸ್ವನಿಧಿ ಯೋಜನೆ ಅಡಿ ತಮಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಳಲು ತೋಡಿಕೊಂಡರು. ತಕ್ಷಣ ಸಾಲದ ವ್ಯವಸ್ಥೆ ಮಾಡುವಂತೆ ಸಚಿವ ಮಧು ಬಂಗಾರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು. ಕಸ್ತೂರ ಬಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಕೋಟೆ ಗಂಗೂರಿನಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಇನ್ನು, ಶಾಲೆ, ಕಾಲೇಜು ಹೊತ್ತಿಗೆ ತಕ್ಕ ಹಾಗೆ ತಮ್ಮೂರಿನಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಯ್ಹೊಳೆಯ ಕೆಲವು ವಿದ್ಯಾರ್ಥಿನಿಯರು ಮನವಿ ಮಾಡಿದರು. ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿ ವಿಜಯ್ ಕುಮಾರ್ ಅವರಿಗೆ ಸಮಸ್ಯೆ ತಕ್ಷಣ ಪರಿಹರಿಸುವಂತೆ ಸಚಿವರು ತಿಳಿಸಿದರು.
ಗೃಹಲಕ್ಷ್ಮಿ ಹಣ ಬರುತ್ತಿಲ್ಲ
ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಕುರಿತು ಹಲವು ಮಹಿಳೆಯರು ಅಹವಾಲು ಸಲ್ಲಿಸಿದರು. ತಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿಲ್ಲ ಎಂದು ಆರೋಪಿಸಿದರು. ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕೂಡಲೆ ಮಹಿಳೆಯರ ಸಮಸ್ಯ ಪರಿಹರಿಸುವಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ಸೂಚಿಸಿದರು. ‘ಬ್ಯಾಂಕ್ ಖಾತೆ ಮತ್ತು ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗದೆ ಇದ್ದರೆ ಪ್ರಯೋಜನ ಸಿಗುವುದಿಲ್ಲʼ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅರ್ಜಿಗಳನ್ನು ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು.
ಭೂ ವಿವಾದದ ಸಾಲು ಸಾಲು ಅರ್ಜಿ
ಜಿಲ್ಲೆಯಲ್ಲಿ ಶರಾವತಿ ಸಂತ್ರಸ್ತರು, ಬಗರ್ ಹುಕುಂ ಸಮಸ್ಯೆ ಹೆಚ್ಚಿದೆ. ಜಮೀನು ಮಂಜೂರು ಮಾಡಿ ಕೊಡುವಂತೆ ಹಲವು ರೈತರು ಮನವಿ ಸಲ್ಲಿಸಿದರು. ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ಕಾನೂನುಗಳು ಬದಲಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುತ್ತದೆ. ಸರ್ಕಾರದ ಹಂತದಲ್ಲಿ ಕಾನೂನು ಬದಲಾವಣೆ ಆಗಬೇಕಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು. ಉಳಿದಂತೆ ಮೂಲ ಸೌಕರ್ಯ, ಆರೋಗ್ಯ ಸಮಸ್ಯೆಗೆ ನೆರವು ಸೇರಿದಂತೆ ವಿವಿಧ ಕಾರಣಕ್ಕೆ ಜನರು ಮನವಿ ಸಲ್ಲಿಸಿದರು.
316 ಅರ್ಜಿ ಸಲ್ಲಿಕೆ
ಖಾಸಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಗುತ್ತಿಗೆ ಪಡೆದ ಸಂಸ್ಥೆ ವೇತನ ಮತ್ತು ಸವಲತ್ತು ನೀಡುತ್ತಿಲ್ಲ. ಕರ್ನಾಟಕ ನೀರಾವರಿ ನಿಗಮದ ವಿವಿಧ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿ ಮೂಲಕ ಪರೀಕ್ಷೆ ನಡೆಸಲಾಗಿದೆ. ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗೆ, ನಾನಾ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಲಾಯಿತು. ಒಟ್ಟು 316 ಅರ್ಜಿಗಳು ಸಲ್ಲಿಕೆಯಾಗಿದೆ. ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಲು ನೂಕು ನುಗ್ಗಲು ಉಂಟಾಯಿತು.
ಅರ್ಜಿ ಕೊಟ್ಟ ತಕ್ಷಣ ಮೊಬೈಲ್ಗೆ ಎಸ್ಎಂಎಸ್
ಜನತಾ ದರ್ಶನದಲ್ಲಿ ಸಚಿವರಿಗೆ ಅರ್ಜಿ ಸಲ್ಲಿಸಿದ ಬಳಿಕ ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಅವುಗಳ ವಿವರವನ್ನು ಕಂಪ್ಯೂಟರ್ನಲ್ಲಿ ನಮೂದು ಮಾಡುತ್ತಿದ್ದರು. ಅರ್ಜಿಯ ಮಾಹಿತಿಯ ಎಸ್ಎಂಎಸ್ ಜನರ ಮೊಬೈಲ್ಗೆ ತಲುಪುವಂತೆ ಮಾಡಲಾಗಿತ್ತು. ಇದರ ಆಧಾರದಲ್ಲಿ ಅರ್ಜಿ ಯಾವ ಹಂತದಲ್ಲಿದೆ, ವಿಲೇವಾರಿಯಾಗಿದೆಯ ಎಂಬ ಮಾಹಿತಿ ಸಾರ್ವಜನಿಕರಿಗೆ ದೊರೆಯಲು ಅನುಕೂಲವಾಗಲಿದೆ.
ಇದನ್ನೂ ಓದಿ – ಜನತಾ ದರ್ಶನ, ಸಿಎಂಗೆ ಹೊಸ ಪ್ರಸ್ತಾವನೆ ಸಲ್ಲಿಸಲು ಮುಂದಾದ ಸಚಿವ ಮಧು ಬಂಗಾರಪ್ಪ, ಏನದು?