ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜುಲೈ 2020
ಕರೋನ ಸೋಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರದ ವೇಳೆ ನಿರ್ಲಕ್ಷ್ಯ ತೊರಿಸಲಾಗಿದೆ ಎಂದು ಆರೋಪಿಸಿ, ಕಾರ್ಪೊರೇಟರ್ ನೇತೃತ್ವದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ಬಿ.ಹೆಚ್.ರಸ್ತೆಯನ್ನು ಬಂದ್ ಮಾಡಿ, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯರ ಆಕ್ರೋಶಕ್ಕೆ ಕಾರಣವೇನು?
ಕರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರವನ್ನು ಶಿವಮೊಗ್ಗದ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನೆರವೇರಿಸಲಾಗಿತ್ತು. ಶುಕ್ರವಾರ ರಾತ್ರಿ ಎಂಟು ಗಂಟೆ ಹೊತ್ತಿಗೆ ಶವವನ್ನು ತಂದ ಮಹಾನಗರ ಪಾಲಿಕೆ ಅಧಿಕಾರಿಗಳು ಸಂಸ್ಕಾರ ನೆರವೇರಿಸಿದ್ದರು. ಆದರೆ ಮೃತದೇಹ ಸಂಪೂರ್ಣ ಸುಡದೆ ಅರೆಬರೆಯಾಗಿತ್ತು. ಸೋಂಕಿತ ವ್ಯಕ್ತಿಯ ಶವ ಸಂಸ್ಕಾರದ ವೇಳೆ ಈ ಪರಿ ನಿರ್ಲಕ್ಷ್ಯ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.
ನಿರ್ಲಕ್ಷ್ಯದ ಸಾಕ್ಷಿ ಹೇಳಿದ ಪಿಪಿಇ ಕಿಟ್
ಸಂಸ್ಕಾರ ನಡೆಸಲು ಚಿತಾಗಾರಕ್ಕೆ ಮೃತದೇಹ ತರುವಾಗ ಪಾಲಿಕೆ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿದ್ದರು. ಸಂಸ್ಕಾರದ ಬಳಿಕ ಆ ಪಿಪಿಇ ಕಿಟ್ಗಳನ್ನು ಅಲಿಯೇ ಬಿಸಾಡಿ ಹೋಗಿದ್ದರು. ಇದು ಅಧಿಕಾರಿಗಳು, ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಒದಗಿಸಿದವು.
ನಡು ರಾತ್ರಿಯೇ ನಡೆಯಿತು ಪ್ರತಿಭಟನೆ
ರೋಟರಿ ಚಿತಾಗಾರದಲ್ಲಿ ಕರೋನ ಸೋಂಕಿತರ ಸಂಸ್ಕಾರ ನಡೆಸಬೇಡಿ ಎಂದು ಸ್ಥಳೀಯ ಸ್ಲಂ ನಿವಾಸಿಗಳು ಒತ್ತಾಯಿಸಿದ್ದರು. ಹೀಗಿದ್ದೂ ಶವ ತಂದು ಅರೆಬರೆ ಸುಟ್ಟಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು, ಶುಕ್ರವಾರ ಮಧ್ಯರಾತ್ರಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಇವರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದಿಢೀರ್ ರಸ್ತೆ ತಡೆದು ಆಕ್ರೋಶ
ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ಪೊಲೀಸರು ಲಾಠಿ ಬೀಸಿದ್ದಾರೆ ಎಂಬ ಆರೋಪದ ಹಿನ್ನೆಲೆ ಇವತ್ತು ಸ್ಥಳೀಯರು ದಿಢೀರ್ ರಸ್ತೆ ತಡೆ ನಡೆಸಿದರು. ಮಹಾದೇವಿ ಟಾಕೀಸ್ ಬಳಿ ಬಿ.ಹೆಚ್.ರಸ್ತೆಯ ಒಂದು ಬದಿಯನ್ನು ಬಂದ್ ಮಾಡಿ, ಪಾಲಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್, ಕಾರ್ಪೊರೇಟರ್ ಯಮುನಾ ರಂಗೇಗೌಡ ಅವರು ಜನರೊಂದಿಗೆ ಪ್ರತಿಭಟನೆ ನಡೆಸಿದರು.
ನಿರ್ಲಕ್ಷಕ್ಕೆ ಕಾರ್ಪೊರೇಟರ್ಗಳು ಆಕ್ರೋಶ
ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್, ಪಾಲಿಕೆ ಅಧಿಕಾರಿಗಳು ಶವ ಸಂಸ್ಕಾರದ ವೇಳೆ ನಿರ್ಲಕ್ಷ್ಯ ತೋರಿಸಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಕ್ಕೂ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಕಮಿಷನರ್
ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಕಮಿಷನರ್ ಚಿದಾನಂದ ವಠಾರೆ, ಜನರ ಮನವೊಲಿಸಲು ಯತ್ನಿಸಿದರು. ಇನ್ಮುಂದ ಹೀಗೆ ಆಗೋದಿಲ್ಲ ಎಂದು ಭರವಸೆ ನೀಡಿದರು. ಕಮಿಷನರ್ ಭರವಸೆ ಮೇರೆಗೆ ಜನರು ಪ್ರತಿಭಟನೆಯನ್ನು ಕೈಬಿಟ್ಟರು.
ಡಿವೈಎಸ್ಪಿ ಉಮೇಶ್ ನಾಯಕ್, ಇನ್ಸ್ಪೆಕ್ಟರ್ ವಸಂತ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಎರಡು ವರ್ಷದ ಮನೆ ಮಾರಾಟಕ್ಕಿದೆ. GROUND FLOOR 2BHK, 1st FLOOR 1 BHK (ಎರಡು ಮನೆಗಳು), 2nd FLOOR BACHELOR ROOM WITH ATTACHED BATHROOM. ವಿಳಾಸ : ತರಳಬಾಳು ಲೇಔಟ್ ಪಕ್ಕ, ತಾವರೆಚಟ್ನಹಳ್ಳಿ, ಪೇಸ್ ಕಾಲೇಜು ಹತ್ತಿರ. ಹೊನ್ನಾಳಿ ರಸ್ತೆ, ಶಿವಮೊಗ್ಗ. ಹೆಚ್ಚಿನ ಮಾಹಿತಿಗೆ : 9972194422 ಜಾಹೀರಾತು
ಶಿವಮೊಗ್ಗದಲ್ಲಿ ಮನೆ ಮಾರಾಟಕ್ಕಿದೆ