ಶಿವಮೊಗ್ಗ: ಹೊಂಗಿರಣ ರಂಗತಂಡ (Theatre) 30ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹಿನ್ನೆಲೆ ವರ್ಷಪೂರ್ತಿ ರಂಗ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 8ರಂದು ಇದರ ಉದ್ಘಾಟನೆ ನೆರವೇರಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸಾಸ್ವೆಹಳ್ಳಿ ಸತೀಶ್ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಸ್ವೆಹಳ್ಳಿ ಸತೀಶ್, ಸುವರ್ಣ ಸಂಸ್ಕೃತಿ ಭವನದಲ್ಲಿ ನೀನಾಸಂ ಪ್ರಾಂಶುಪಾಲರಾದ ಡಾ. ಎಂ. ಗಣೇಶ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಲಾವಿದರ ಒಕ್ಕೂಟದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ವಿಶೇಷ ರಂಗ ಪ್ರದರ್ಶನ ‘ವಿಫುಲ’
ಉದ್ಘಾಟನೆಯ ನಂತರ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಕವನಗಳ ಆಧಾರಿತ ಕಾವ್ಯಾಭಿನಯ ‘ವಿಫುಲ’ ರೂಪ ಧಾರಿಣಿ ನಾಟಕ ಪ್ರದರ್ಶನಗೊಳ್ಳಲಿದೆ. ಶ್ರೀಪಾದ್ ಭಟ್ ಮತ್ತು ಸಾಸ್ವೆಹಳ್ಳಿ ಸತೀಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕವು ರಂಗಭೂಮಿಯ ಹೊಸ ಪ್ರಯೋಗಗಳಲ್ಲಿ ಒಂದಾಗಿದೆ ಎಂದು ಸಾಸ್ವೆಹಳ್ಳಿ ಸತೀಶ್ ತಿಳಿಸಿದರು.
ಹೊಂಗಿರಣದ ಬಗ್ಗೆ
- 1996ರಲ್ಲಿ ಗಾಜನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ನಾಟಕಗಳ ಮೂಲಕ ಈ ತಂಡ ಆರಂಭವಾಯಿತು.
- ಇದುವರೆಗೆ 100ಕ್ಕೂ ಹೆಚ್ಚು ಪ್ರಸಿದ್ಧ ನಾಟಕಗಳನ್ನು ಪ್ರದರ್ಶಿಸಿದೆ. ದೆಹಲಿ, ಗುಜರಾತ್, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದ ಖ್ಯಾತಿ ಹೊಂದಿದೆ.
- ನಾಟಕ ಪ್ರದರ್ಶನ ಮಾತ್ರವಲ್ಲದೆ ವಿಚಾರ ಸಂಕಿರಣ, ಪುಸ್ತಕ ಪ್ರಕಟಣೆ, ಮಕ್ಕಳ ಬೇಸಿಗೆ ಶಿಬಿರ, ರಂಗೋತ್ಸವ ಮತ್ತು ಮೇಕ್ ಅಪ್ ತರಬೇತಿಗಳಂತಹ ಹತ್ತು ಹಲವು ರಂಗ ಚಟುವಟಿಕೆಗಳಲ್ಲಿ ತಂಡ ಸಕ್ರಿಯವಾಗಿದೆ.



ಇದನ್ನೂ ಓದಿ – ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

About The Editor
ನಿತಿನ್ ಆರ್.ಕೈದೊಟ್ಲು






