ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ
ಶಿವಮೊಗ್ಗ ಲೈವ್.ಕಾಂ | SHIMOGA CITY NEWS | 05 JANUARY 2021
ನಡು ರಸ್ತೆಯಲ್ಲಿ ಕಾದು ಕೂತಿದ್ದಾನೆ ಜವರಾಯ, ವಾಹನ ಚಾಲಕರೆ ಎಚ್ಚರ.. ಎಚ್ಚರ.. ಇದು ಶಿವಮೊಗ್ಗದ ಪ್ರಮುಖ ಹೈವೇ. ವಾಹನಗಳು ವೇಗ ಪಡೆದುಕೊಳ್ಳುವ ಪಾಯಿಂಟ್ನಲ್ಲೇ ದಿಢೀರ್ ಎದುರಾಗುತ್ತವೆ ಗುಂಡಿಗಳು. ಸ್ವಲ್ಪ ಯಾಮಾರಿದರೆ ಜೀವ ಕಳೆದುಕೊಳ್ಳವುದು ಫಿಕ್ಸ್.
ಶಿವಮೊಗ್ಗದ ಬಿ.ಹೆಚ್.ರಸ್ತೆಯ ದುಸ್ಥಿತಿ ಇದು. ಇಲ್ಲಿನ ಎನ್.ಸಿ.ಸಿ. ಕಚೇರಿ ಮುಂದೆ ರಸ್ತೆಯಲ್ಲಿರುವ ಗುಂಡಿಗಳಿವು.

ಬಿದ್ದವರೆಷ್ಟೋ? ಗಾಯ ಮಾಡಿಕೊಂಡವರೆಷ್ಟೋ?
ತುಂಗಾ ಸೇತುವೆ ಮೇಲಿಂದ ವಿದ್ಯಾನಗರ ಕಡೆಗೆ ಬರುವವರಿಗೆ ಮೊದಲು ಸ್ವಾಗತಿಸುವುದೇ ಈ ಭಯಾನಕ ಗುಂಡಿಗಳು. ಡಬಲ್ ರಸ್ತೆಗೆ ಪ್ರವೇಶ ಪಡೆಯುವ ಮೊದಲು ದೊಡ್ಡ ಗುಂಡಿಗಳಿವೆ. ಸೇತುವೆ ಕಡೆಯಿಂದ ಬರುವವರು ಈ ತಿರುವಿನಲ್ಲಿ ವಾಹನದ ವೇಗ ಹೆಚ್ಚಿಸಿಕೊಳ್ಳುತ್ತಾರೆ. ಅದರೆ ದಿಢೀರ್ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ.
ರಾತ್ರಿ ಹೊತ್ತಲ್ಲಿ ಕಾಣೋದೇ ಇಲ್ಲ
ವಿದ್ಯಾನಗರದ ಡಬಲ್ ರೋಡ್ ಶುರುವಾಗುವುದೇ ಈ ಗುಂಡಿಗಳನ್ನು ದಾಟಿದ ಮೇಲೆ. ಹಾಗಾಗಿ ಗುಂಡಿಗಳು ಇರುವ ಕಡೆ ಬೀದಿ ದೀಪಗಳಿಲ್ಲ. ರಾತ್ರಿ ವೇಳೆ ಇಲ್ಲಿ ಬರುವ ವಾಹನ ಸವಾರರಿಗೆ ಗುಂಡಿಗಳು ಇದ್ದಾವೆ ಅನ್ನುವುದು ಗೊತ್ತೇ ಆಗುವುದಿಲ್ಲ. ಈ ವೇಳೆ ಇಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಜವರಾಯನ ದರ್ಶನವಾಗುತ್ತದೆ. ಕಾರು, ಆಟೋ ಚಾಲಕರು ವೇಗವಾಗಿದ್ದರೆ ನಿಯಂತ್ರಣ ಕಳೆದುಕೊಂಡಿರುವ ಪ್ರಕರಣಗಳು ಇದ್ದಾವೆ.
ಡಾಂಬಾರು ಹಾಕದೆ ಹೋದರು
ಇತ್ತೀಚೆಗಷ್ಟೇ ಸೇತುವೆ ಬಳಿ ಇದ್ದ ಗುಂಡಿಗಳಿಗೆಲ್ಲ ಡಾಂಬಾರು ಹಾಕಿ ಮುಚ್ಚಲಾಗಿದೆ. ಆದರೆ ಈ ಗುಂಡಿಗಳನ್ನು ಹಾಗೆ ಬಿಟ್ಟು ಹೋಗಿದ್ದಾರೆ. ಇಲ್ಲಿ ಅಪಘಾತಗಳು ಸಂಭವಿಸುತ್ತಿರುವುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಗುಂಡಿಗಳ ಮುಂದೆ ಬ್ಯಾರಿಕೇಡ್ ಇಟ್ಟು, ಚಾಲಕರಿಗೆ ಮುನ್ನೆಚ್ಚರಿಕೆ ನೀಡಲು ಯತ್ನಿಸಿದ್ದಾರೆ.
ಇಲ್ಲಿರುವ ಗುಂಡಿಗಳು ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಅಂತೇನಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳವರೆಗೆ ಪ್ರತಿಯೊಬ್ಬರು ಇಲ್ಲಿ ಸಂಚಾರಿಸುತ್ತಾರೆ. ಆದರೆ ಯಾರೊಬ್ಬರು ಗುಂಡಿಗಳು ಮತ್ತು ಇವುಗಳಿಂದ ಉಂಟಾಗುತ್ತಿರುವ ಸಮಸ್ಯೆ ಕುರಿತು ಕಿಂಚಿತ್ತು ಯೋಚಿಸಿದಂತೆ ಕಾಣುತ್ತಿಲ್ಲ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

