ಶಿವಮೊಗ್ಗ ಲೈವ್.ಕಾಂ | HOSANAGARA NEWS | 28 FEBRUARY 2021
ಊರು ಕೇರಿಯೇ ಇಲ್ಲದೆ ಅಲೆಮಾರಿಯಾಗಿ ವಾಸಿಸುತ್ತಿರುವ ಜೋಗಿ ಜನಾಂಗವನ್ನು ಎಸ್.ಸಿ ಪಟ್ಟಿಗೆ ಸೇರಿಸುವಂತೆ ಜನಾಂಗದ ರಾಜ್ಯಾಧ್ಯಕ್ಷ ಶಿವಾಜಿ ಡಿ. ಮಧುರ್ಕರ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಹೊಸನಗರ ತಾಲ್ಲೂಕು ಬಟ್ಟೆಮಲ್ಲಪ್ಪದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲಾ ಜಾತಿ, ಜನಾಂಗಗಳಿಗು ಕನಿಷ್ಠ ತಮ್ಮದೇ ಆದ ಊರು, ಕೇರಿ, ಮನೆ ದೇವಸ್ಥಾನ ಇರುತ್ತದೆ. ಆದರೆ ಜೋಗಿ ಸಮುದಾಯದಲ್ಲಿ ಬಹುತೇಕರು ಇಂದಿಗೂ ರಸ್ತೆ, ಚರಂಡಿ, ಸ್ಲಂಗಳ ಟೆಂಟ್ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದು ಇಡೀ ರಾಜ್ಯವೇ ತಲೆ ತಗ್ಗಿಸುವ ವಿಚಾರ ಎಂದರು.
ರಾಜ್ಯವಷ್ಟೇ ಅಲ್ಲದೆ, ದೇಶದ ವಿವಿಧೆಡೆ ವಾಸಿಸುತ್ತಿರುವ ಜೋಗಿ ಸಮುದಾಯವು ನಾನಾ ಹೆಸರುಗಳಿಂದ ಕರೆಯಲ್ಪಡುತ್ತಿದೆ. ಕರ್ನಾಟಕದಲ್ಲೇ ಹಲವು ಪರ್ಯಾಯ ಪದಗಳಿಂದ ಜೋಗಿ ಸಮುದಾವನ್ನು ಕರೆಯಲಾಗುತ್ತಿದೆ. ರಾಜ್ಯದಲ್ಲಿ ಒಂದೆರಡು ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಡೆ ಸಮುದಾಯಕ್ಕೆ ತನ್ನದೇ ಆದ ಐಡೆಂಟಿಟಿ ಕೂಡ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಈ ಹಿಂದೆ ಸಿಎಂ ಆಗಿದ್ದಾಗಲೇ ನಮ್ಮ ಜನಾಂಗವನ್ನ ಎಸ್.ಸಿ. ಪಟ್ಟಿಗೆ ಸೇರ್ಪಡೆಗೊಳಿಸುವ ಭರವಸೆ ನೀಡಿದ್ದರು. ಅಲ್ಲದೆ, ಸಮುದಾಯದ ಕುಲಶಾಸ್ತ್ರೀಯ ಅಧ್ಯಯನವನ್ನೂ ಕೂಡ ಮಾಡಿಸಿದ್ದಾರೆ. ಆದರೆ ಈಗ ಆ ವರದಿ ಎಲ್ಲಿದೆ ಎಂಬುದೇ ಗೊತ್ತಿಲ್ಲ. ಈಗಲಾದರೂ ಯಡಿಯೂರಪ್ಪ ಅವರು ನಮ್ಮ ಸಮುದಾಯವನ್ನು ಎಸ್.ಸಿ. ಪಟ್ಟಿಗೆ ಸೇರ್ಪಡೆಗೊಳಿಸಿ ಉಪಕರಿಸಬೇಕು ಎಂದು ಶಿವಾಜಿ ಡಿ. ಮಧುರ್ಕರ್ ಒತ್ತಾಯಿಸಿದರು.
ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ
ಪ್ರೊ.ಚಂದ್ರಪ್ಪ ಜೋಗಿ ಮಾತನಾಡಿ, ಇಪ್ಪತ್ತೊಂದನೇ ಶತಮಾನದಲ್ಲೂ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿ ಅಲೆಮಾರಿಗಳಾಗಿ ಬದುಕುತ್ತಿರುವ ಜೋಗಿ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸರ್ಕಾರವವನ್ನು ಒತ್ತಾಯಿಸಿದರು.
ಸಮುದಾಯದ ರಾಜ್ಯ ಪ್ರಮುಖರಾದ ಡಾ. ಆನಂದಪ್ಪ ಜೋಗಿ, ರಾಮನಾಥ್ ಬಳೆಗಾರ್, ಪ್ರತಾಪ್ ಓ. ಜೋಗಿ, ಜೆ.ಹನುಮಂತಪ್ಪ ಹರಾಳು, ರಾಜು ಮಧುರ್ಕರ್, ರಾಜ್ಯ ಪ್ರಶಸ್ತಿ ವಿಜೇತ ಹೊಳಲಿಂಗಪ್ಪ ಜೋಗಿ, ಆಂಜನೇಯ ಜೋಗಿ, ಶಿವಕುಮಾರ್ ಜಿ. ಜೋಗಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]