33 ಲಕ್ಷ ರೂ. ಸರ್ಕಾರದ ನೆರವು ತಿರಸ್ಕರಿಸಿ ಸಾಹಸಕ್ಕೆ ಕೈ ಹಾಕಿದ ಚರಕದ ಮಹಿಳೆಯರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ |SHIMOGA / SAGARA NEWS | 5 ಸೆಪ್ಟೆಂಬರ್ 2021

ಮೂರು ವರ್ಷವಾದರೂ ಸರ್ಕಾರ ಘೋಷಿಸಿದ ಲಕ್ಷಾಂತರ ರೂಪಾಯಿ ಅನುದಾನ ಕೈ ಸೇರಲಿಲ್ಲ. ಹಾಗಾಗಿ ಆ ದುಡ್ಡನ್ನೆ ತಿರಸ್ಕರಿಸಿದ ಮಹಿಳೆಯರು ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದಾರೆ. ತಾವು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಮಹಿಳೆಯರ ಈ ನಡೆ ಅಧಿಕಾರಿಗಳ ಜಾಣ ಕುರುಡುತನಕ್ಕೆ ತಪರಾಕಿ ಕೊಟ್ಟಂತಾಗಿದೆ.

ಸಾಗರ ತಾಲೂಕು ಭೀಮನಕೋಣೆಯ ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ‘ಪವಿತ್ರ ವಸ್ತ್ರ ಅಭಿಯಾನ’ ಆಯೋಜಿಸಲಾಗಿದೆ. ಇದರ ಅಂಗವಾಗಿ ರಾಜ್ಯಾದ್ಯಂತ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಯೋಜಿಸಲಾಗಿದೆ.

60 ಲಕ್ಷದ ವಸ್ತುಗಳ ಮಾರಾಟ

ಸಂಘದ ವತಿಯಿಂದ ಲಕ್ಷಾಂತರ ಮೀಟರ್ ಬಟ್ಟೆ, ಸೀರೆ, ಚಾಪೆ, ಮಡಕೆ ಸೇರಿದಂತೆ ಹಲವು ಕರಕುಶಲ ವಸ್ತುಗಳನ್ನು ಉತ್ಪಾದಿಸಲಾಗಿದೆ. ಆದರೆ ಲಾಕ್ ಡೌನ್ ಕಾರಣದಿಂದಾಗಿ ಸುಮಾರು 60 ಲಕ್ಷ ರೂ. ಮೌಲ್ಯದ ವಸ್ತುಗಳು ಮಾರಟವಾಗದೆ ಹಾಗೆ ಉಳಿದಿದೆ. ಇದರಿಂದ ರೈತರು, ಕುಶಲಕರ್ಮಿಗಳು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೆ ಕಾರಣಕ್ಕೆ ಪ್ರದರ್ಶನ ಮತ್ತು ಮಾರಾಟ ಮೇಳಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಚರಕ ಮಹಿಳಾ ವಿವಿದೋದ್ದೇಶ ಸಂಘದ ಕಾರ್ಯದರ್ಶಿ ಪ್ರತಿಭಾ ರಾಘವೇಂದ್ರ ತಿಳಿಸಿದ್ದಾರೆ.

ಲಕ್ಷ ಲಕ್ಷ ರೂ. ಅನುದಾನ ತಿರಸ್ಕಾರ

ಕುರಕುಶಲ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಪ್ರೋತ್ಸಾಹ ಧನ ಘೋಷಿಸಿತ್ತು. ಸಾಗರದ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘಕ್ಕೆ 33 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಬ್ಯಾಂಕಿಗೂ ಹಣ ಜಮೆಯಾಗಿತ್ತು.ಆದರೆ ಅದು ಚರಕ ಸಂಸ್ಥೆಯವರ ಕೈ ಸೇರದಂತೆ ನಿರ್ಬಂಧಿಸಲಾಗಿತ್ತು.ಇದೇ ಕಾರಣಕ್ಕೆ ಸಂಸ್ಥೆಯ ಮಹಿಳೆಯರು ಅಧಿಕಾರಿಗಳನ್ನು ಹತ್ತಾರು ಭಾರಿ ಭೇಟಿಯಾದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅನುದಾನವನ್ನೇ ತಿರಸ್ಕರಿಸಿ, ಚರಕ ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು.

charaka angadi

ಸ್ವಾಮೀಜಿಗಳ ನೆರವು ಕೇಳಿದ ಮಹಿಳೆಯರು

ಚರಕ ಸಂಸ್ಥೆಯಲ್ಲಿ ನೈಸರ್ಗಿಕ ಬಣ್ಣ ಬಳಕೆ ಮಾಡಿ ಕೈಗಮಗ್ಗದ ಉತ್ಪನ್ನಗಳು, ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಭಿಯಾನದಲ್ಲಿ ಇವುಗಳನ್ನೆ ಪ್ರದರ್ಶನಕ್ಕೆ ಇರಿಸಿ, ಮಾರಾಟ ಮಾಡಲಾಗುತ್ತದೆ ಎಂದು ಸಂಘದ ಕಾರ್ಯದರ್ಶಿ ಪ್ರತಿಭಾ ರಾಘವೇಂದ್ರ ತಿಳಿಸಿದ್ದಾರೆ. ಅಲ್ಲದೆ ಹಲವು ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಜೊತೆ ಚರ್ಚಿಸಲಾಗಿದೆ. ಸ್ವಾಮೀಜಿಗಳು ಸಾಧ್ಯವಿದ್ದಷ್ಟು ಕೈ ಉತ್ಪನ್ನಗಳನ್ನು ಕೊಂಡೊಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮಲೆನಾಡಿನಲ್ಲಿ ಹೆಸರುವಾಸಿ ಚರಕ ಸಂಸ್ಥೆ

ಚರಕ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ ಮಲೆನಾಡಿನಲ್ಲಿ ಹೆಸರುವಾಸಿ. 1996ರಲ್ಲಿ ಸಾಗರ ತಾಲೂಕು ಹೆಗ್ಗೋಡಿನ ಭೀಮನಕೋಣೆ ಗ್ರಾಮದಲ್ಲಿ ಚರಕ ಸಹಕಾರ ಸಂಘ ಆರಂಭವಾಯಿತು. 30 ಮಹಿಳೆಯರು, ಎರಡು ಕೈಮಗ್ಗದೊಂದಿಗೆ ಆರಂಭವಾದ ಸಂಘ ಕೆಲವೇ ವರ್ಷದಲ್ಲಿ ರಾಜ್ಯದ ಮೂಲೆ ಮೂಲೆ ತಲುಪಿತು. ಇಲ್ಲಿ ತಯಾರದ ಬಟ್ಟೆಗಳು ದೇಶವ್ಯಾಪಿ ಬಳಕೆಗೆ ಬಂದವು. ಕೆಲವೇ ವರ್ಷದಲ್ಲಿ ಚರಕ ಸಂಸ್ಥೆ ವಾರ್ಷಿಕ ಕೋಟಿ ಕೋಟಿ ರೂ. ವಹಿವಾಟು ನಡೆಸುತ್ತಿತ್ತು.

ADVT JULY NANJAPPA HOSPITAL HOME LAB TESTING

ಸುಮಾರು 300 ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಶೇ.90ರಷ್ಟು ಮಹಿಳೆಯರೆ ಇದ್ದರು. ಪೈಸೆ ಪೈಸೆಗೂ ಕಷ್ಟಪಡುತ್ತಿದ್ದ ಮಹಿಳೆಯರು ಚರಕದ ಕಾರಣದಿಂದಾಗಿ ಪ್ರತಿ ತಿಂಗಳು ಸಾವಿರಾರು ರೂ. ದುಡಿಯಲು ಆರಂಭಿಸಿದ್ದರು. ನೈಸರ್ಗಿಕ ಬಣ್ಣ ಬಳಸಿ ಕೈಮಗ್ಗದಿಂದ ಬಟ್ಟೆ ತಯಾರಿಸಿ, ದೇಸಿ ಮಳಿಗೆಗಳ ಮೂಲಕ ನೇರವಾಗಿ ಮಾರಾಟ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಕಾರಣದಿಂದ ವಹಿವಾಟು ಸಂಪೂರ್ಣ ನಿಂತು ಹೋಯಿತು. ಲಕ್ಷ ಲಕ್ಷ ನಷ್ಟ ಅನುಭವಿಸಿತು. ಚರಕ ಸಂಸ್ಥೆ ದಿವಾಳಿ ಆಯಿತೆಂದು ಘೋಷಿಸಲಾಯಿತು. ಈ ಮಧ್ಯೆ ಸರ್ಕಾರದ ಪ್ರೋತ್ಸಾಹಧನ ಕೂಡ ಕೈಸೇರದೆ ಚರಕ ಮತ್ತೆ ಸೊರಗಿತ್ತು.

ಈಗ ಮಹಿಳೆಯರು ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಆಯೋಜಿಸುವ ಮೂಲಕ ಚರಕ ಸಂಸ್ಥೆಗೆ ಮತ್ತೆ ಶಕ್ತಿ ತುಂಬಲು ಯತ್ನಿಸುತ್ತಿದ್ದಾರೆ. ಪ್ರೋತ್ಸಾಧನ ಬಿಡುಗಡೆಗೆ ಮೀನಮೇಷ ಎಣಿಸಿದ ಅಧಿಕಾರಿಗಳಿಗೂ ಚರಕದ ಮಹಿಳೆಯರು ತಮ್ಮ ಕೆಲಸದ ಮೂಲಕವೇ ಪ್ರತ್ಯುತ್ತರ ನೀಡಲು ಸಿದ್ಧರಾಗಿದ್ದಾರೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment