ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಡಿಸೆಂಬರ್ 2021
ವಿಧಾನಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅತ್ಯಾಚಾರ ಸಂಬಂಧ ನೀಡಿದ ಹೇಳಿಕೆ ಖಂಡಿಸಿ, ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು, ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿದ್ದಾಗ ಸದನದಲ್ಲಿ ‘ಅತ್ಯಾಚಾರಕ್ಕೊಳಗಾದ ಮಹಿಳೆಯ ಪರಿಸ್ಥಿತಿಯಂತಾಗಿದೆ’ ಎಂದು ಹೀನ ಹೇಳಿಕೆ ನೀಡಿದ್ದರು. ಈಗಲೂ ಅದೇ ರೀತಿಯ ಹೇಳಿಕೆ ನೀಡಿ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಸುರೇಖಾ ಮುರಳೀಧರ್ ಅವರು, ವಿಧಾನಸಭೆ ಎಂಬುದು ಪೂಜ್ಯ ಸ್ಥಳ. ಜನರು ಆರಿಸಿ ಕಳುಹಿಸಿರುವ ಸದಸ್ಯರು ಗೌರವಯುತವಾಗಿ ನಡೆದುಕೊಳ್ಳಬೇಕು. ಆದರೆ ರಮೇಶ್ ಕುಮಾರ್ ಅವರು ಮುಗ್ದರಲ್ಲ, ಪೆದ್ದರಲ್ಲ. ಅನುಭವಿ ರಾಜಕಾರಣಿ. ಅಂತಹವರಿಗೆ ನಾವು ಬುದ್ದಿ ಹೇಳಿಕೊಡಬೇಕಾಗಿದೆ ಎಂದು ಆರೋಪಿಸಿದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮೀಪತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.