SHIVAMOGGA LIVE NEWS | 22 DECEMBER 2022
ಸುದ್ದಿಯ ಹಿನ್ನೆಲೆಶಿವಮೊಗ್ಗ : ಸಿಟಿ ಸೆಂಟರ್ ಮಾಲ್ ಗುತ್ತಿಗೆ ಅವಧಿ ವಿಸ್ತರಣೆ ವಿಷಯ ಪಾಲಿಕೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಸೇರ್ಪಡೆಯಾಗಲು ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಅವರು ಕಾರಣ ಎಂಬುದು ತನಿಖಾ ವರದಿಯಲ್ಲಿದೆ. ಅದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜೆಂಡಾದಲ್ಲಿ ವಿಷಯ ಸೇರ್ಪಡೆಯಾಗಿದ್ದು ಹೇಗೆ ಎಂಬುದನ್ನು ತನಿಖೆ ಮಾಡಲು ಸಮಿತಿ ರಚಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಪ್ರತಿಭಟನೆಯ ಬಳಿಕ ಸಮಿತಿಯ ವರದಿಯನ್ನು ಸಭೆಯಲ್ಲಿ ಮಂಡಿಸಲಾಗಿದೆ. ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಅವರು ಫೋನ್ ಮೂಲಕ ಅಧಿಕಾರಿಗೆ ವಿಷಯ ಸೇರಿಸಬೇಕು ಎಂದು ಸೂಚಿಸಿರುವುದು ವರದಿಯಿಂದ ಬಹಿರಂಗಗೊಂಡಿದೆ ಎಂದು ತಿಳಿಸಿದರು.
ಕೆಲವು ದಿನದ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಚನ್ನಬಸಪ್ಪ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತಪ್ಪು ಹೊರೆಸುವ ಪ್ರಯತ್ನ ಮಾಡಿದ್ದಾರೆ. 2015ರಲ್ಲೇ ಮಾಲ್ (city centre mall) ಲೀಸ್ ಅವಧಿಯನ್ನು 60 ವರ್ಷಕ್ಕೆ ವಿಸ್ತರಿಸಲು ಯತ್ನಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ. ತಮ್ಮ ತಪ್ಪು ಮರೆಮಾಚಲು ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ರೇಖಾ ರಂಗನಾಥ್ ಆಪಾದಿಸಿದರು.
ಸ್ಥಾಯಿ ಸಮಿತಿ ಸಭೆಯಲ್ಲಿ ತಿರಸ್ಕರಿಸಲ್ಪಟ್ಟ ವಿಷಯ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಸೇರ್ಪಡೆಯಾಗಲು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಇದು ಕೋಟ್ಯಂತರ ರುಪಾಯಿಯ ಹಗರಣವಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ – ಶಿವಮೊಗ್ಗ ರಿಂಗ್ ರೋಡ್, ಜಿಲ್ಲೆಯ ಹಲವು ಹೆದ್ದಾರಿ ಅಭಿವೃದ್ಧಿಗೆ ಒಪ್ಪಿಗೆ, ಯಾವೆಲ್ಲ ರಸ್ತೆ ಅಭಿವೃದ್ಧಿಯಾಗುತ್ತೆ?
ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ರಮೇಶ್ ಹೆಗ್ಡೆ, ಹೆಚ್.ಸಿ.ಯೋಗೇಶ್, ಆರ್.ಸಿ.ನಾಯ್ಕ್, ಯಮುನಾ ರಂಗೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.