SHIMOGA : ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನೀಡಿದೆ. ಅವೆಲ್ಲಾ ತಾತ್ಕಾಲಿಕ. ಇವುಗಳ ಬದಲು ಭೂಮಿಯ ಭಾಗ್ಯ ಕರುಣಿಸಿದ್ದರೆ ರೈತರು ಈ ನಾಯಕರನ್ನು ಸದಾ ಸ್ಮರಿಸುತ್ತಿದ್ದರು. ಮಲೆನಾಡಿನ 11 ಜಿಲ್ಲೆಯ ರೈತರ ಸಮಸ್ಯೆ ಪರಿಹರಿಸುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ಮಾತನ್ನು ಉಳಿಸಿಕೊಳ್ಳಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿ ಮುಖಂಡ ತೀ.ನಾ. ಶ್ರೀನಿವಾಸ್ ಆಗ್ರಹಿಸಿದರು.
ವರದಿ ಪಡೆದರು ಸಮಸ್ಯೆ ಪರಿಹರಿಸಿಲ್ಲ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನಾ.ಶ್ರೀನಿವಾಸ್, ಕಾಂಗ್ರೆಸ್ ನಾಯಕರು ಶಿವಮೊಗ್ಗದಲ್ಲಿ ಜನಾಕ್ರೋಶ ಸಮಾವೇಶ ನಡೆಸಿದ್ದರು. ಮಲೆನಾಡಿನ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಿದ್ದರು. ನಾನು ಆ ಸಮಿತಿಯಲ್ಲಿದ್ದೆ. ವರದಿ ಸಿದ್ದಪಡಿಸಿ ಕೊಟ್ಟಿದ್ದು, ಪರಿಶೀಲಿಸಿ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈತನಕ ಸಮಸ್ಯೆ ಪರಿಹಾರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬಂದ್ಮೇಲೆ ಮಲೆನಾಡನ್ನು ಮರೆತರು
ರೈತರ ಸಮಸ್ಯೆ ಸರ್ಕಾರಕ್ಕೆ ಬೇಕಾಗಿಲ್ಲ. ಅಧಿಕಾರಕ್ಕೆ ಬಂದ ಬಳಿಕ ಮಲೆನಾಡನ್ನು ಮರೆತಿದ್ದಾರೆ. ಕಾಂಗ್ರೆಸ್ ಪಕ್ಷ ಕೂಡ ಬಿಜೆಪಿಯ ಹಾದಿಯನ್ನೇ ಹಿಡಿಯುತ್ತಿದೆ. ಜಿಲ್ಲೆಯಲ್ಲಿರುವಷ್ಟು ಅರಣ್ಯ, ಕಂದಾಯ ಭೂಮಿ ಸಮಸ್ಯೆ ಎಲ್ಲೂ ಇಲ್ಲ ಎಂದು ಸ್ವತಃ ಕಂದಾಯ ಸಚಿವರೇ ಹೇಳಿದ್ದರು. ಆದರೆ, ಅವರು ಇದನ್ನು ಪರಿಹರಿಸುವ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ – ನ್ಯೂ ಮಂಡ್ಲಿ ಸರ್ಕಲ್ನಲ್ಲಿ ಹಾರನ್ ಮಾಡಿದ್ದಕ್ಕೆ ಚಾಲಕನ ಮೇಲೆ ಹಲ್ಲೆ