ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 05 ಜುಲೈ 2019
ಯಡಿಯೂರಪ್ಪ ಸಿಎಂ ಆಗಬಾರದು ಎಂದು ನಮ್ಮ ಮನೆ ದೇವರು ಶಿಕಾರಿಪುರದ ಹುಚ್ಚರಾಯಸ್ವಾಮಿಗೆ ಹರಕೆ ಹೊತ್ತಿದ್ದೇನೆ. ಹಾಗಿದ್ದು ಯಡಿಯೂರಪ್ಪ ಈ ಅವಧಿಯಲ್ಲಿ ಸಿಎಂ ಆದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದುಗೋಷ್ಠಿ ನಡೆಸಿದ ಬೇಳೂರು ಗೋಪಾಲಕೃಷ್ಣ, ರಾಜ್ಯ ಸರ್ಕಾರವನ್ನು ಯಾರೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರು ಮನಸು ಮಾಡಿದರೆ, ಆಪರೇಷನ್ ಕಮಲ ಮಾಡಬಹುದು. ಎರಡ್ಮೂರು ಶಾಸಕರು ಅವರ ಸಂಪರ್ಕದಲ್ಲಿ ಇದ್ದಾರೆ ಎಂದರು.
ಹುಳಿ ದ್ರಾಕ್ಷಿಗೆ ಇನ್ನೆಷ್ಟು ಹಾರುತ್ತಾರೋ
ಯಡಿಯೂರಪ್ಪ ಪಾಲಿಗೆ ಸಿಎಂ ಹುದ್ದೆ ಅನ್ನುವುದು ಹುಳಿ ದ್ರಾಕ್ಷಿಯ ಹಾಗೆ. ಅದಕ್ಕಾಗಿ ಇನ್ನೆಷ್ಟು ಹಾರಿದರೂ ಪ್ರಯೋಜನ ಇಲ್ಲ ಎಂದು ಲೇವಡಿ ಮಾಡಿದ ಬೇಳೂರು ಗೋಪಾಲಕೃಷ್ಣ, ಮೋದಿ ಸರ್ಕಾರದ ಸರ್ಜಿಕಲ್ ದಾಳಿ ಭಾವನಾತ್ಮಕವಾಗಿ ಜನರನ್ನು ಸೆಳೆದಿತ್ತು. ಹಾಗಾಗಿ, ಮತದಾರರು ಕೇಂದ್ರವನ್ನು ನೋಡಿ ಮತ ಹಾಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ, ರಾಘವೇಂದ್ರ ಮುಖ ನೋಡಿ ಯಾರೂ ಮತ ನೀಡಿಲ್ಲ ಎಂದು ಲೇವಡಿ ಮಾಡಿದರು.
ವಿಐಎಸ್ಎಲ್, ಎಂಪಿಎಂ ಮುಚ್ಚಿದ್ದೇ ರಾಘವೇಂದ್ರ
ಭದ್ರಾವತಿ ವಿಐಎಸ್ಎಲ್, ಎಂಪಿಎಂ ವಿಚಾರವಾಗಿ ಚುನಾವಣೆಗೂ ಮೊದಲು ರಾಘವೇಂದ್ರ ಹೇಳಿದ್ದೇ ಬೇರೆ. ಈಗ ಅವರೇ ಈ ಕಾರ್ಖಾನೆಗಳನ್ನು ಮುಚ್ಚಿಸಿದ್ದಾರೆ ತುಮರಿ ಸೇತುವೆ ವಿಚಾರದಲ್ಲೂ ಮುಂಡಾ ಮೋಚಿದ್ದಾರೆ ಎಂದು ಆರೋಪಿಸಿದರು.
ತಾಖತ್ತಿದ್ದರೆ ಗೋ ಹತ್ಯೆ ನಿಲ್ಲಿಸಲಿ
ಗೋ ಹತ್ಯೆ ವಿಚಾರವಾಗಿ ಶೋಭಾ ಮೇಡಂ ಅವರು ಬಹಳ ಮಾತಾಡುತ್ತಿದ್ದಾರೆ. ಈಗ ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಆದರೂ ಗೋ ಮಾಂಸ ರಫ್ತು ವಿಚಾರದಲ್ಲಿ ಭಾರತ ನಂಬರ್ ಒನ್ ಸ್ಥಾನದಲ್ಲಿದೆ. ತಾಖತ್ತಿದ್ದರೆ ರಾಷ್ಟ್ರಪತಿ ಬಳಿ ಹೋಗಿ ಗೋ ಹತ್ಯೆ ನಿಷೇಧಕ್ಕೆ ಸಹಿ ಮಾಡಿಸಿಕೊಂಡು ಬರಲಿ ಎಂದು ಶೋಭಾ ಕರಂದ್ಲಾಜೆಗೆ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಹುಲ್ತಿಕೊಪ್ಪ ಶ್ರೀಧರ್ ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ 7411700200
ಸುದ್ದಿಗಾಗಿ ಕರೆ ಮಾಡಿ 9964634494
E Mail – [email protected]