ಶಿವಮೊಗ್ಗದ ಹಲವು ರಾಜಕಾರಣಿಗಳಿಗೆ ಭವಿಷ್ಯದ ಆತಂಕ, ಯಾರ್‍ಯಾರ ಬಗ್ಗೆ ಏನಿದೆ ಚರ್ಚೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 8 JUNE 2024

SHIMOGA : ಲೋಕಸಭೆ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟ ಜಯಭೇರಿ ಬಾರಿಸಿದೆ. ಸಂಸದರಾಗಿ ಬಿ.ವೈ.ರಾಘವೇಂದ್ರ ಪುನರಾಯ್ಕೆ ಆಗಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಿಂದ ಡಾ. ಧನಂಜಯ ಸರ್ಜಿ ಇದೆ ಮೊದಲು ವಿಧಾನಸೌಧ ಪ್ರವೇಶಿಸುತ್ತಿದ್ದಾರೆ. ಇವೆರಡು ಚುನಾವಣೆಗಳು ಹಲವರ ರಾಜಕೀಯ ಭವಿಷ್ಯ (Future) ಉಜ್ವಲಗೊಳಿಸಿದೆ. ಅದರೆ ಮತ್ತಷ್ಟು ದಿಗ್ಗಜರು, ಕಾರ್ಯಕರ್ತರ ಎದುರು ಮುಂದೇನು ಎಂಬ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ.

ks-eshwarappa.webpಯಾರೆಲ್ಲರ ರಾಜಕೀಯ ಭವಿಷ್ಯವೇನು?

ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ : ಲೋಕಸಭೆ ಚುನಾವಣೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಹಾಗಾಗಿ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ. ಚುನಾವಣೆಯಲ್ಲಿ ಕೇವಲ 30 ಸಾವಿರ ಮತ ಗಳಿಸುವಲ್ಲಿ ಸಾದ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ‍ಶ್ವರಪ್ಪ ನಡೆ ಬಗ್ಗೆ ಕುತೂಹಲವಿದೆ. ಪಕ್ಷಕ್ಕೆ ಮರಳುತ್ತಾರಾ? ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಮುಂದುವರೆಸುತ್ತ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಾರಾ? ಅನ್ನುವುದಕ್ಕೆ ಇನ್ನಷ್ಟೆ ಉತ್ತರ ದೊರೆಯಬೇಕಿದೆ. ಇನ್ನೊಂದೆಡೆ ಪುತ್ರ ಕೆ.ಇ.ಕಾಂತೇಶ್‌ ರಾಜಕೀಯ ಅಂತ್ಯವಾಗುತ್ತ ಅಥವಾ ಜಿಲ್ಲಾ ಪಂಚಾಯಿತಿ, ಪಾಲಿಕೆ ಚುನಾವಣೆಗೆ ಅಣಿಯಾಗುತ್ತಾರಾ ಅನ್ನುವುದು ಸದ್ಯದ ಕುತೂಹಲ.

Minister-Madhu-Bangarappa-and-M-Srikanth-Congress-Leaderಮಧು ಬಂಗಾರಪ್ಪ, ಶಿಕ್ಷಣ ಸಚಿವ : ಮೇಲ್ನೋಟಕ್ಕೆ ಲೋಕಸಭೆ ಚುನಾವಣೆ ಎದುರಿಸಿದ್ದು ಗೀತಾ ಶಿವರಾಜ್‌ ಕುಮಾರ್‌. ವಾಸ್ತವದಲ್ಲಿ ಈ ಬಾರಿಯೂ ಚುನಾವಣೆ ನಡೆದಿದ್ದು ಮಧು ಬಂಗಾರಪ್ಪ ಮತ್ತು ಬಿ.ವೈ.ರಾಘವೇಂದ್ರ ಮಧ್ಯದಲ್ಲೆ. ಗೀತಾ ಶಿವರಾಜ್‌ ಕುಮಾರ್‌ ಅವರ ಸೋಲು ಮಧು ಬಂಗಾರಪ್ಪ ಅವರ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ಹುಟ್ಟಿಸಿದೆ. ಜಿಲ್ಲಾ ಕಾಂಗ್ರೆಸ್‌ನೊಳಗೆ ಮಧು ಬಂಗಾರಪ್ಪ ವಿರುದ್ಧ ಅಸಮಾಧಾನಿತರು ಒಬ್ಬಿಬ್ಬರಲ್ಲ. ಲೋಕಸಭೆ, ನೈಋತ್ಯ ಶಿಕ್ಷಕರ ಕ್ಷೇತ್ರ, ನೈಋತ್ಯ ಪದವೀಧರರ ಕ್ಷೇತ್ರದ ಫಲಿತಾಂಶಗಳನ್ನು ಮುಂದಿಟ್ಟುಕೊಂಡು ವಿರೋಧಿ ಬಣ ಮಧು ಬಂಗಾರಪ್ಪ ಸಚಿವ ಸ್ಥಾನಕ್ಕೆ ಕುತ್ತು ತರಬಹುದು ಎನ್ನಲಾಗುತ್ತಿದೆ. ಮೈಸೂರಿನಲ್ಲಿ ಸಿಎಂ ಮಾನಸ ಪುತ್ರ, ಬೆಂಗಳೂರು ಗ್ರಾಮಾಂತರದಲ್ಲಿ ಡಿಸಿಎಂ ಸಹೋದರ ಸೋತಿದ್ದಾರೆ. ಹಾಗಾಗಿ ಸೋಲಿನ ಕಾರಣಕ್ಕೆ ಮಧು ಬಂಗಾರಪ್ಪ ಸಚಿವ ಸ್ಥಾನ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬ ಚರ್ಚೆಯು ಇದೆ.

ayanuru%20manjunathಆಯನೂರು ಮಂಜುನಾಥ್‌, ಮಾಜಿ ಸಂಸದ : ಸಂಸತ್ತು, ವಿಧಾನ ಮಂಡಲದ ನಾಲ್ಕೂ ಸದನ ಕಂಡ ಅನುಭವಿ ರಾಜಕಾರಣಿ. ಕಳೆದ ವರ್ಷ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಾಗಿತ್ತು. ಕಾಂಗ್ರೆಸ್‌ ಪಕ್ಷ ಸೇರಿ ನೈಋತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ವರ್ಷದಲ್ಲಿ ಎರಡು ಸೋಲು, ಮೂರು ಪಕ್ಷ ಬದಲಾವಣೆ ಮಾಡಿದ್ದಾರೆ. ಹಾಗಾಗಿ ಆಯನೂರು ಮಂಜುನಾಥ್‌ ರಾಜಕೀಯ ಭವಿಷ್ಯವೇನು ಎಂಬ ಕುತೂಹಲವಿದೆ. ಕಾಂಗ್ರೆಸ್‌ನಲ್ಲೆ ಉಳಿಯುತ್ತಾರೋ? ಉಳಿದರೆ ಸ್ಥಾನಮಾನವೇನು? ಎಂಬ ಚರ್ಚೆಗಳು ಆರಂಭವಾಗಿವೆ.

sp%20dineshಎಸ್‌.ಪಿ.ದಿನೇಶ್‌, ಪಕ್ಷೇತರ ಅಭ್ಯರ್ಥಿ : ದಶಕಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ದುಡಿದಿದ್ದರು. ಸಹಕಾರ ಕ್ಷೇತ್ರದಲ್ಲಿ ಉತ್ತಮ ಹೆಸರಿದೆ. ನೈಋತ್ಯ ಪದವೀಧರರ ಕ್ಷೇತ್ರದ ಟಿಕೆಟ್‌ ದೊರೆಯದಿದ್ದಕ್ಕೆ ಅಸಮಾಧನಗೊಂಡು ಬಂಡಾಯವಾಗಿ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಹೀನಾಯ ಸೋಲಾಗಿದೆ. ದಿನೇಶ್‌ ಅವರು ಕಾಂಗ್ರೆಸ್‌ಗೆ ಮರಳುತ್ತಾರೋ? ಸಹಕಾರ ಕ್ಷೇತದಲ್ಲಿ ಮಾತ್ರ ತೊಡಗಿಸಿಕೊಳ್ಳುತ್ತಾರೊ? ಅನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ.

ಮಾಜಿ ಕಾರ್ಪೊರೇಟರ್‌ಗಳು, ಪ್ರಮುಖರು : ಈಶ್ವರಪ್ಪ ಬಂಡಾಯ ಸ್ಪರ್ಧೆಗೆ ಅಣಿಯಾದಾಗ ಬಿಜೆಪಿಯ ಹಲವರು ಬಹಿರಂಗವಾಗಿ, ಮತ್ತೂ ಕೆಲವರು ಗೌಪ್ಯವಾಗಿ ಬೆಂಬಲ ಸೂಚಿಸಿದ್ದರು. ಬಹಿರಂಗವಾಗಿ ಈಶ್ವರಪ್ಪ ಬೆನ್ನಿಗೆ ನಿಂತವರ ರಾಜಕೀಯ ಭವಿಷ್ಯದ ಕುರಿತು ಕುತೂಹಲವಿದೆ. ರಾಷ್ಟ್ರಭಕ್ತರ ಬಳಗ ಶಿವಮೊಗ್ಗ ಪಾಲಿಕೆ ಚುನಾವಣೆ ಮೇಲೆ ಕಣ್ಣಿಟಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಅವರಿಗೆಲ್ಲ ಅವಕಾಶವಾಗುವ ಸಾಧ್ಯತೆಯೂ ಇದೆ. ಇನ್ನೊಂದೆಡೆ ಬಿಜೆಪಿಯೊಳಗೇ ಇದ್ದುಕೊಂಡು ಗೌಪ್ಯವಾಗಿ ಈ‍ಶ್ವರಪ್ಪ ಪರ ಕೆಲಸ ಮಾಡಿದವರು, ತಟಸ್ಥವಾಗಿ ಉಳಿದವರಿಗೆ ಈಗ ಭವಿಷ್ಯದ ಚಿಂತೆ ಎದುರಾಗಿದೆ. ವಿಧಾನ ಪರಿಷತ್‌ ಚುನಾವಣೆ ಸಂದರ್ಭ ಕಾಂಗ್ರೆಸ್‌ನಲ್ಲು ಇದೇ ಸ್ಥಿತಿ ಉಂಟಾಗಿತ್ತು. ಅಂತಹವರಿಗು ಈಗ ರಾಜಕೀಯ ಭವಿಷ್ಯದ ಚಿಂತೆಯಾಗಿದೆ.

ತಾಲೂಕು ಮಟ್ಟದ ನಾಯಕರು : ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿಯು ಹಲವರು ಲೋಕಸಭೆ, ವಿಧಾನ ಪರಿಷತ್‌ ಚುನಾವಣೆಗಳ ಸಂದರ್ಭ ಆಚೀಚೆ ಕೆಲಸ ಮಾಡಿದ ಆರೋಪಗಳಿವೆ. ಪಕ್ಷದೊಳಗೆ ಇರುವ ವಿರೋಧಿಗಳು ಇದನ್ನು ಜಿಲ್ಲಾ ಮಟ್ಟಕ್ಕೆ, ಹೈಕಮಾಂಡ್‌ ಹಂತಕ್ಕೆ ತಲುಪಿಸಲು ವರದಿ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಟಿಕೆಟ್‌ ನಿರೀಕ್ಷೆಯಲ್ಲಿರುವ ಹಲವರಿಗು ಈಗ ರಾಜಕೀಯ ಭವಿಷ್ಯದ ಯೋಚನೆ ಆರಂಭವಾಗಿದೆ.

ಹಲವರ ರಾಜಕೀಯಕ್ಕೆ ಮರುಜೀವ

ಹಲವರ ರಾಜಕೀಯ ಭವಿಷ್ಯ ಅಸ್ಥಿರವಾಗಿದ್ದರೆ ಮತ್ತಷ್ಟು ರಾಜಕಾರಣಿಗಳಿಗೆ ಇವೆರಡು ಚುನಾವಣೆ ರಾಜಕೀಯ ಮರುಹುಟ್ಟು ನೀಡಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಾಗರ, ಸೊರಬ, ಶಿವಮೊಗ್ಗ ಗ್ರಾಮಾಂತರದಲ್ಲಿ ಸೋಲಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿಗೆ ಲೀಡ್‌ ಸಿಕ್ಕಿದೆ. ಇದರಿಂದ ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಕುಮಾರ್‌ ಬಂಗಾರಪ್ಪ, ಅಶೋಕ್‌ ನಾಯ್ಕ್‌ ಅವರ ಹೆಸರು ಪಕ್ಷದ ವೇದಿಕೆಗಳಲ್ಲಿ ಪುನಃ ಮುನ್ನಲೆಗೆ ಬಂದಿದೆ. ಭದ್ರಾವತಿಯಲ್ಲಿ ಜೆಡಿಎಸ್‌ನ ಶಾರದಾ ಅಪ್ಪಾಜಿಗೌಡ ಅವರಿಗು ಶಕ್ತಿ ಬಂದಂತಾಗಿದೆ. ಮುಂದೆ ಮೈತ್ರಿ ಮುಂದುವರೆದರೆ ಶಾರದಾ ಅಪ್ಪಾಜಿಗೌಡ ಅವರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಡಾ. ಧನಂಜಯ ಸರ್ಜಿಗೆ ಅದ್ಧೂರಿ ಸ್ವಾಗತ, ತೆರೆದ ವಾಹನದಲ್ಲಿ ಮೆರವಣಿಗೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 8, 2024

Leave a Comment