ಶಂಕರಘಟ್ಟ : ಐದು ವರ್ಷದ ಬಳಿಕ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಸಹ್ಯಾದ್ರಿ ಉತ್ಸವಕ್ಕೆ (Utsava) ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 9 ರಿಂದ ಮೂರು ದಿನ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಉತ್ಸವ ನಡೆಯಲಿದೆ.
ಈಗಾಗಲೆ ಸಹ್ಯಾದ್ರಿ ಉತ್ಸವ ಕುರಿತು ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. 24 ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಪ್ರತಿ ಕಾಲೇಜಿನಿಂದ ಆಯಾ ಸ್ಪರ್ಧೆಗೆ ನಿಗದಿತ ಸ್ಪರ್ಧಿಗಳನ್ನು ಕಳುಹಿಸುವಂತೆ ತಿಳಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳು, ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳೂ ಭಾಗವಹಿಸಬಹುದಾಗಿದೆ.

ಐದು ವರ್ಷದ ಬಳಿಕ ಉತ್ಸವ
ಕುವೆಂಪು ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿ ವರ್ಷ ಸಹ್ಯಾದ್ರಿ ಉತ್ಸವ ನಡೆಯುತ್ತಿತ್ತು. 2019ರಲ್ಲಿ ಸಹ್ಯಾದ್ರಿ ಉತ್ಸವ ನಡೆದಿತ್ತು. ಕೋವಿಡ್ ಹಿನ್ನೆಲೆ ಎರಡು ವರ್ಷ ಉತ್ಸವ ಸ್ಥಗಿತಗೊಳಿಸಲಾಗಿತ್ತು. ಆ ನಂತರ ನಾನಾ ಕಾರಣಕ್ಕೆ ಉತ್ಸವ ನಡೆದಿರಲಿಲ್ಲ. ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ಸಹ್ಯಾದ್ರಿ ಉತ್ಸವ ಪುನಾರಂಭಕ್ಕೆ ಆಗ್ರಹಿಸಿದ್ದವು.

ಯಾವೆಲ್ಲ ಸ್ಪರ್ಧೆ ನಡೆಯಲಿದೆ?
ಡಿ.9, 10 ಮತ್ತು 11ರಂದು ಸಹ್ಯಾದ್ರಿ ಉತ್ಸವ ನಡೆಯಲಿದೆ. ಶಾಸ್ತ್ರೀಯ ಸಂಗೀತ, ಶಾಸ್ತ್ರಿಯ ವಾದ್ಯ, ಲಘು ಸಂಗೀತ, ಪಾಶ್ಚಿಮಾತ್ಯ ಸಂಗೀತ, ಸಮೂಹ ಗಾಯನ, ಜನಪದ ನೃತ್ಯ, ಶಾಸ್ತ್ರೀಯ ನೃತ್ಯ, ಕ್ವಿಜ್, ಸಿದ್ಧ ಭಾಷಣ, ಚರ್ಚಾ ಸ್ಪರ್ಧೆ, ಏಕಾಂಕ ನಾಟಕ, ಪ್ರಹಸನ, ಮೂಕಾಭಿನಯ, ಅನುಕರಣೆ, ಸ್ಥಳದಲ್ಲೇ ಚಿತ್ರ ಬರೆಯುವುದು, ಕೊಲ್ಯಾಜ್, ಭಿತ್ತಿಚಿತ್ರ ತಯಾರಿಸುವುದು, ಜೇಡಿ ಮಣ್ಣಿನಿಂದ ಅಕೃತಿ ರಚನೆ, ವ್ಯಂಗ್ಯ ಚಿತ್ರ, ರಂಗೋಲಿ, ಸ್ಥಳದಲ್ಲೆ ಫೋಟೊ ತೆಗೆಯುವುದು, ಸಾಂಸ್ಕೃತಿಕ ಮೆರವಣಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಪ್ರತಿ ಕಾಲೇಜಿನಿಂದ 49 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರಲಿದೆ. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಡಿ.19 ರಿಂದ 23ರವರೆಗೆ ನಡೆಯಲಿರುವ ದಕ್ಷಿಣ ಪ್ರಾಂತೀಯ ವಿಶ್ವವಿದ್ಯಾಲಯಗಳ ಯುವಜನೋತ್ಸವದಲ್ಲಿ ಪಾಲ್ಗೊಳ್ಳಬಹುದಾಗಿದೆ.


ಇದನ್ನೂ ಓದಿ » ಕುವೆಂಪು ವಿವಿ ಕುರಿತು ವಿಧಾನಸೌಧದಲ್ಲಿ ಚರ್ಚೆ | 3 ಫಟಾಫಟ್ ಸುದ್ದಿಗಳು