ಹೊಸ ವರ್ಷದ ರಾತ್ರಿಯ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್‌, ಕಾರು ಚಾಲಕನ ವಿರುದ್ಧ ಮರ್ಡರ್‌ ಕೇಸ್‌, ಯಾಕೆ?

SHIVAMOGGA LIVE NEWS, 2 JANUARY 2025

ಶಿವಮೊಗ್ಗ : ಹೊಸ ವರ್ಷದ ರಾತ್ರಿ ಎಂಕೆಕೆ ರಸ್ತೆಯಲ್ಲಿ ಸಂಭವಿಸದ ಅಪಘಾತ ಪ್ರಕರಣ ಸಂಬಂಧ ಕಾರು ಚಾಲಕನ (Driver) ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಬಿ.ಹೆಚ್‌.ರಸ್ತೆಯಿಂದ ಬೈಕ್‌ ಸವಾರರನ್ನು ಬೆನ್ನಟ್ಟಿಕೊಂಡು ಬಂದು ಗುದ್ದಿಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಲಾಗಿದೆ.

ಘಟನೆ ಕುರಿತು ಎಫ್‌ಐಆರ್‌ನಲ್ಲಿ ಏನೆಲ್ಲ ನಮೂದಾಗಿದೆ? ಅದರ ವಿವರ ಇಲ್ಲಿದೆ.

ನಡುರಾತ್ರಿ ಚರ್ಚ್‌ಗೆ ಹೊರಟಾಗ ಕಿರಿಕ್‌

ಟಿಪ್ಪು ನಗರದ ಪ್ರಜ್ವಲ್‌ (18), ಗೋಪಾಳದ ಸ್ನೇಹಿತ ಧನುಷ್‌ (18) ಮನೆಯಲ್ಲಿ ಹೊಸ ವರ್ಷಾಚರಣೆ ಮುಗಿಸಿ ಬೈಕ್‌ನಲ್ಲಿ ಚರ್ಚ್‌ಗೆ ತೆರಳುತ್ತಿದ್ದರು. ಪ್ರಜ್ವಲ್‌ ಬೈಕ್‌ ಚಲಾಯಿಸುತ್ತಿದ್ದ. ಬಿ.ಹೆಚ್.ರಸ್ತೆಯಲ್ಲಿ ತೆರಳುತ್ತಿದ್ದಾಗ ಪಕ್ಕದಲ್ಲಿ ಸಾಗುತ್ತಿದ್ದ ವೋಲ್ವೊ ಕಾರಿನ ಮಿರರ್‌ಗೆ ಬೈಕ್ ಹ್ಯಾಂಡಲ್‌ ತಾಗಿತ್ತು. ಸಿಟ್ಟಾದ ಕಾರು ಚಾಲಕ (Driver), ಬೈಕ್‌ ಸವಾರರಿಗೆ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.

Siddaiah-Road-Car-mishap

Kalleshwara-Enterprises.webp

ಬೈಕ್‌ ನಿಲ್ಲಿಸಿ ಕಾರಿನ ಗಾಜಿಗೆ ಗುದ್ದಿದ್ದಾರೆ

ಆಕ್ರೋಶಗೊಂಡ ಸವಾರರು ಬೈಕ್‌ ನಿಲ್ಲಿಸಿದ್ದರು. ಕಾರು ಚಾಲಕನ ಬಳಿ ತೆರಳಿದ್ದ ಧನುಷ್‌, ‘ಆಕಸ್ಮಿಕವಾಗಿ ಬೈಕ್‌ ತಾಗಿದೆ. ಅದಕ್ಕೆ ಬೈದಿದ್ದೇಕೆʼ ಎಂದು ಪ್ರಶ್ನಿಸಿ ಕಾರಿನ ಗಾಜಿಗೆ ಗುದ್ದಿದ್ದಾನೆ. ತಕ್ಷಣ ಬೈಕ್‌ನಲ್ಲಿ ಇಬ್ಬರು ಅಲ್ಲಿಂದ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ. ಕಾರು ಚಾಲಕ ಕೂಡಲೆ ಬೈಕ್‌ ಸವಾರರನ್ನು ಹಿಂಬಾಲಿಸಿದ್ದಾನೆ. ಅಮೀರ್‌ ಅಹಮದ್‌ ಸರ್ಕಲ್‌ ಸಮೀಪ ಚಾಲಕ ಕಾರನ್ನು ಬೈಕ್‌ಗೆ ಗುದ್ದಿಸುವಂತೆ ಮಾಡಿದ್ದಾನೆ. ಹಾಗಾಗಿ ಬೈಕ್‌ ಸವಾರರು ಎಂಕೆಕೆ ರಸ್ತೆ ಕಡೆಗೆ ಬೈಕ್‌ ತಿರುಗಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಹಂಪ್‌ ಬಳಿ ಸ್ಲೋ ಮಾಡಿದಾಗ ಡಿಕ್ಕಿ

ಸಿದ್ದಯ್ಯ ಸರ್ಕಲ್‌ ಬಳಿ ಹಂಪ್‌ ಇದ್ದಿದ್ದರಿಂದ ಬೈಕ್‌ ಸ್ಲೋ ಆಗಿದೆ. ಹಿಂದಿನಿಂದ ಬಂದ ಕಾರು ಬೈಕ್‌ಗೆ ಗುದ್ದಿದೆ ಎಂದು ಆರೋಪಿಸಲಾಗಿದೆ. ಆಗ ಬೈಕ್‌ ಪಲ್ಟಿಯಾಗಿ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದೆ. ಪ್ರಜ್ವಲ್‌ ಕೂಡ ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ರಸ್ತೆ ಪಕ್ಕದಲ್ಲಿ ಕೂರಲು ಹಾಕಿದ್ದ ಬೆಂಚ್‌ಗೆ ತಾಗಿದ್ದರಿಂದ ಧನುಷ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಲಾಗಿದೆ.

Siddaiah Cirlce MKK road incident on new year night - Car Driver

ಕೊಲೆ, ಕೊಲೆ ಯತ್ನ ಕೇಸ್‌

ಕಾರಿನ ಮಿರರ್‌ಗೆ ಬೈಕ್‌ ಹಾಂಡಲ್‌ ತಾಗಿದ ವಿಚಾರವಾಗಿ ನಡೆದ ಜಗಳ ದ್ವೇಷದ ಹಿನ್ನೆಲೆ, ಕಾರುನ್ನ ಹಿಂಬಾಲಿಸಿ ಗುದ್ದಿಸಿದ್ದರಿಂದ ದನುಷ್‌ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಹಾಗಾಗಿ ಕಾರು ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇನ್ನು, ಪ್ರಜ್ವಲ್‌ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಾಗಾಗಿ ಕಾರು ಚಾಲಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಒಟ್ಟು ನಾಲ್ಕು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಟಾಪ್‌ 5 ಸುದ್ದಿಗಳು, ಫಟಾಫಟ್‌ ನ್ಯೂಸ್‌

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment