SHIVAMOGGA LIVE NEWS, 22 JANUARY 2025
ಶಂಕರಘಟ್ಟ : ಜ್ಞಾನ ಸಹ್ಯಾದ್ರಿ ಆವರಣದ ಬಸವ ಸಭಾ ಭವನದಲ್ಲಿ ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ ನಡೆಯಿತು. ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ್ ಗೆಹ್ಲೋಟ್ ಸ್ವರ್ಣ ಪದಕ (Gold Medal) ಪ್ರದಾನ ಮಾಡಿದರು.
ಯಾರೆಲ್ಲ ಸ್ವರ್ಣ ಪದಕ ಪಡೆದರು?
ಎಂ.ಎ. ಕನ್ನಡ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ವಸಂತ ಕುಮಾರ್.ಬಿ.ಜೆ 10 ಚಿನ್ನದ ಪದಕ, 1 ನಗದು ಬಹುಮಾನ ಪಡೆದಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸ್ವರ್ಣ ಪದಕ ಪ್ರದಾನ ಮಾಡಿದರು.
ಎಂ.ಎಸ್ಸಿ ಪರಿಸರ ವಿಜ್ಞಾನ ವಿಭಾಗದ ಸಾನಿಯಾ ಫಿರ್ದೋಸ್ 6 ಸ್ವರ್ಣ ಪದಕ, ಎಂ.ಎ.ಸಮಾಜಶಾಸ್ತ್ರ ರಕ್ಷಿತಾ.ಎಸ್.ಎಸ್, ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗದ ರಕ್ಷೀತ್.ಎಸ್, ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಶುಭಶ್ರೀ.ಎಸ್, ಎಟಿಎನ್ಸಿ ಕಾಲೇಜಿನ ಬಿ.ಕಾಂ ಹರ್ಷಿತಾ.ಜಿ 5 ಸ್ವರ್ಣ ಪದಕ ಪ್ರದಾನ ಮಾಡಲಾಯಿತು.
ಗಣಿತಶಾಸ್ತ್ರದಲ್ಲಿ ವಂದನಾ ಎ.ಶೆಟ್ಟಿ 4 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ, ಎಂ.ಎ. ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಸಂಗೀತಾ.ಬಿ.ಕೆ, ಎಂ.ಎಸ್ಸಿ ರಸಾಯನಶಾಸ್ತ್ರ ಅರ್ಪಿತಾ.ಆರ್, ಎಂ.ಎಸ್ಸಿ ಸಸ್ಯಶಾಸ್ತ್ರದಲ್ಲಿ ಧನುರ್ವಿ.ಡಿ.ಎಂ 4 ಸ್ವರ್ಣ ಪದಕ ಪಡೆದರು.
ಎಂ.ಎ ಉರ್ದು ವಿಭಾಗದಲ್ಲಿ ಗುಲ್ನಾಜ್ 3 ಸ್ವರ್ಣ ಪದಕ ಮತ್ತು 1 ನಗದು ಬಹುಮಾನ, ಎಂ.ಎ.ಇಂಗ್ಲೀಷ್ನಲ್ಲಿ ಯೋಷಿತಾ ಎಸ್.ಸೊನಾಲೆ, ಎಂ.ಎ. ರಾಜ್ಯಶಾಸ್ತ್ರದಲ್ಲಿ ವನಿತಾ ಬಿ.ಆರ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಿಂಧು ಕೆ.ಟಿ, ಎಂ.ಕಾಂನಲ್ಲಿ ಪೂರ್ಣ ಪ್ರಜ್ಞಾ ಬಿ.ಆರ್, ಔದ್ಯೋಗಿಕ ರಸಾಯನಶಾಸ್ತ್ರದಲ್ಲಿ ರಂಜಿತಾ ಎ.ಆರ್, ಪ್ರಾಣಿಶಾಸ್ತ್ರದಲ್ಲಿ ಧನ್ಯಾ ಕೆ.ವೈ, ಎಂ.ಸಿ.ಎ ಅಶ್ವಥ ಬಿ.ಬೈತಾನಾಲ್ 3 ಸ್ವರ್ಣ ಪದಕ ಪಡೆದರು.
204 ಅಭ್ಯರ್ಥಿಗಳಿಗೆ ಪಿಹೆಚ್ಡಿ
ವಿವಿಧ ಭಾಗದಲ್ಲಿ 204 ಅಭ್ಯರ್ಥಿಗಳು ಪಿ.ಹೆಚ್.ಡಿ ಪಡೆದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅಭ್ಯರ್ಥಿಗಳಿಗೆ ಪಿ.ಹಚ್.ಡಿ ಪದವಿ ಪ್ರದಾನ ಮಾಡಿದರು. ಪಿ.ಹೆಚ್.ಡಿ ಪಡೆದ ಒಟ್ಟು ಅಭ್ಯರ್ಥಿಗಳ ಪೈಕಿ 115 ಪುರುಷರು, 89 ಮಹಿಳೆಯರು ಇದ್ದಾರೆ.
ಗೃಹ ಸಚಿವರ ಆಪ್ತ ಕಾರ್ಯದರ್ಶಿಗೆ ಪಿಹೆಚ್ಡಿ
ಗೃಹ ಸಚಿವ ಡಾ. ಜಿ.ಪರಮೇಶ್ವರ್ ಆಪ್ತ ಕಾರ್ಯದರ್ಶಿ ಕೆ.ಚನ್ನಬಸಪ್ಪ ಅವರು ಪರಿಸರ ಅಧ್ಯಯನ ವಿಭಾಗದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿ ಪ್ರದಾನ ಮಾಡಲಾಯಿತು. ಈ ಹಿಂದೆ ಕೆ.ಚನ್ನಬಸಪ್ಪ ಅವರು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿದ್ದರು. ಬಳಿಕ ತುಮಕೂರು ಜಿಲ್ಲೆ ಅಪರ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.
ಸ್ವಾಮೀಜಿಗು ಪಿ.ಹೆಚ್.ಡಿ ಪ್ರದಾನ
ಚಿತ್ರದುರ್ಗದ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಕುಮಾರ ಸ್ವಾಮೀಜಿ ಅವರಿಗು ಪಿ.ಹೆಚ್.ಡಿ. ಪ್ರದಾನ ಮಾಡಲಾಯಿತು.
ಪಿಹೆಚ್ಡಿ ಅಭ್ಯರ್ಥಿಗಳಿಗೆ ರಾಜ್ಯಪಾಲರ ಗೌರವ
ಪಿಹೆಚ್ಡಿ ಪದವಿ ಪಡೆದ ಅಭ್ಯರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗೌರವ ಸಲ್ಲಿಸಿದ ವಿದಾನ ಮೆಚ್ಚುಗೆ ಪಡೆಯಿತು. ಪ್ರತಿ ಭಾರಿ ಪಿಹೆಚ್ಡಿ ಪಡೆದ ಅಭ್ಯರ್ಥಿಗಳು ವೇದಿಕೆಗೆ ಆಗಮಿಸಿ ರಾಜ್ಯಪಾಲರು, ಕುಲಪತಿ, ಕುಲಸಚಿವರ ಆಸನದ ಹಿಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಫೋಟೊ ಸೆಷನ್ ಮುಗಿಯುತ್ತಿದ್ದಂತೆ ರಾಜ್ಯಪಾಲರು ತಮ್ಮ ಆಸನದಿಂದ ಎದ್ದು ಎಲ್ಲರಿಗು ನಮಸ್ಕಾರ ಮಾಡಿ ಗೌರವ ಸಲ್ಲಿಸುತ್ತಿದ್ದರು.
ಸರ್ಟಿಫಿಕೇಟ್ ಅದಲು ಬದಲು
ಪದವಿ ಪ್ರದಾನದ ವೇಳೆ ಗಡಿಬಿಡಿ ಮತ್ತು ಗೊಂದಲ ಉಂಟಾಯಿತು. ಇದರಿಂದ ಸ್ವರ್ಣ ಪದಕಗಳು, ಸರ್ಟಿಫಿಕೇಟ್ಗಳು ಅದಲು ಬದಲಾದವು. ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅಭ್ಯರ್ಥಿಗಳು ಸರ್ಟಿಫಿಕೇಟ್ನಲ್ಲಿ ತಮ್ಮ ಹೆಸರ ಬದಲು ಬೇರೊಬ್ಬರ ಹೆಸರು ಕಂಡು ಕಕ್ಕಾಬಿಕ್ಕಿಯಾಗುತ್ತಿದ್ದರು. ಪಿಹೆಚ್ಡಿ ಪಡೆದ ಕೆಲವು ಅಭ್ಯರ್ಥಿಗಳ ಸರ್ಟಿಫಿಕೇಟ್ ಸಿಗದೆ ಅವರನ್ನು ಕೂಡಲೆ ವೇದಿಕೆ ಹಿಂಭಾಗಕ್ಕೆ ಕರೆದೊಯ್ದು ಸಮಾಧಾನ ಮಾಡಿದ ಪ್ರಸಂಗವು ನಡೆಯಿತು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್, ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಇದನ್ನೂ ಓದಿ » ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200