ಭದ್ರಾವತಿ: ನಿಧಿ ಸಿಕ್ಕಿದೆ ಎಂದು ನಂಬಿಸಿ ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಆಮಿಷ ಒಡ್ಡಿ, ಬ್ಯಾಂಕ್ ಉದ್ಯೋಗಿಯೊಬ್ಬರಿಂದ ₹10 ಲಕ್ಷ ನಗದು ಹಣ ಪಡೆದು ವಂಚಿಸಿರುವ ಘಟನೆ ಭದ್ರಾವತಿ ತಾಲ್ಲೂಕಿನ ಬಾರಂದೂರು ಬಳಿ ನಡೆದಿದೆ. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ನಿವಾಸಿ ಹಾಗೂ ಬ್ಯಾಂಕ್ ಉದ್ಯೋಗಿ ಒಬ್ಬರು ನೀಡಿದ ದೂರಿನ ಮೇರೆಗೆ ರಮೇಶ್, ಹಿರಿಯ ವಯಸ್ಸಿನ ವ್ಯಕ್ತಿ ಹಾಗೂ ಇತರ 4 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಸುಮಾರು 45 ದಿನಗಳ ಹಿಂದೆ ಹಾವೇರಿ ಮೂಲದ ರಮೇಶ್ ಎಂಬಾತ ಬ್ಯಾಂಕ್ ಉದ್ಯೋಗಿಗೆ ಕರೆ ಮಾಡಿ, ಮನೆಯೊಂದರಲ್ಲಿ ನಿಧಿ ರೂಪದಲ್ಲಿ ಎರಡೂವರೆ ಕೆ.ಜಿ ಬಂಗಾರದ ನಾಣ್ಯಗಳು ಸಿಕ್ಕಿದ್ದು, ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ್ದನು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರಮೇಶ್ ಎಂಬಾತ ನಂಬಿಕೆ ಬರುವಂತೆ ಅಸಲಿ ಚಿನ್ನದ ನಾಣ್ಯದ ತುಣುಕೊಂದನ್ನು ಪರಿಶೀಲಿಸಲು ನೀಡಿದ್ದರಿಂದ ಸತ್ಯವೆಂದು ನಂಬಿದ್ದ ಬ್ಯಾಂಕ್ ಉದ್ಯೋಗಿ, ಜುಲೈ 25ರಂದು ಹಣದೊಂದಿಗೆ ಬಾರಂದೂರು ಬೈಪಾಸ್ ಸರ್ವೀಸ್ ರಸ್ತೆಗೆ ತೆರಳಿದ್ದರು. ಅಲ್ಲಿ ರಮೇಶ್ ಹಾಗೂ ವೃದ್ಧ ವ್ಯಕ್ತಿ ಹಣವನ್ನು ಪರಿಶೀಲಿಸುತ್ತಿದ್ದಂತೆ, ಏಕಾಏಕಿ ಮೂರು ಮೋಟಾರು ಬೈಕ್ಗಳಲ್ಲಿ ಬಂದ ನಾಲ್ವರು ಅಪರಿಚಿತರು ಏರುಧ್ವನಿಯಲ್ಲಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದೇ ಸಮಯದಲ್ಲಿ ರಮೇಶ್ ₹10 ಲಕ್ಷ ನಗದು ಹಣವಿದ್ದ ಬ್ಯಾಗ್ನ್ನು ಪಡೆದುಕೊಂಡು, ಚಿನ್ನದ ನಾಣ್ಯವನ್ನೂ ನೀಡದೆ ತನ್ನ ಸಹಚರರೊಂದಿಗೆ ಮೂರು ಬೈಕ್ಗಳಲ್ಲಿ ಅಂಡರ್ ಪಾಸ್ ಮೂಲಕ ಭದ್ರಾವತಿ ಕಡೆಗೆ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.