ಶುಭೋದಯ ಶಿವಮೊಗ್ಗ NEWS : ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಏನೇನಾಯ್ತು? ಇಡೀ ದಿನದ ಸುದ್ದಿಯನ್ನು ಫಟಾಫಟ್ ಓದಲು ಶುಭೋದಯ ಶಿವಮೊಗ್ಗ NEWS.
ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ತುಮರಿ : ಶರಾವತಿ ಹಿನ್ನೀರಿನ ತಲ್ಲೆ–ಅಗ್ಗೇರಿ ಲಿಂಕ್ ರಸ್ತೆ ಕಾಮಗಾರಿಗೆ ಬೊಬ್ಬಿಗೆ ಗ್ರಾಮದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ತಾಲ್ಲೂಕಿನ ಕರೂರು, ಬಾರಂಗಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 250 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಹಿಂದೂ ಸಾಮ್ರಾಜ್ಯೋತ್ಸವ, ಶೋಭಾಯಾತ್ರೆ
ಸಾಗರ : ಗಾಂಧಿ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವ ಮತ್ತು ಬೃಹತ್ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಶೋಭಾಯಾತ್ರೆ ನಡೆಸಲಾಯಿತು.
ಮಾರಿಕಾಂಬಾ ಸಮಿತಿಯಲ್ಲಿ ಭ್ರಷ್ಟಾಚಾರದ ಆರೋಪ
ಸಾಗರ : ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಮಹಾಸಭೆ ಕರೆದು ಲೆಕ್ಕಾಚಾರ ನೀಡಿಲ್ಲ. ಸಾರ್ವಜನಿಕರಿಗೆ ಸುಳ್ಳು ಹೇಳಿ ಕೆಲವು ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಈ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾರಿಕಾಂಬಾ ಹಿತರಕ್ಷಣಾ ಸಮಿತಿಯಿಂದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಆಟೋ, ಬೈಕ್ ಡಿಕ್ಕಿ, ಇಬ್ಬರು ಸಾವು
ಹೊಸಗುಂದ : ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಆಟೋ, ಬೈಕ್ ಡಿಕ್ಕಿ ಇಬ್ಬರು ಸಾವು. ಬೈಕ್ ಸವಾರ ಸುಧೀರ್ (30), ಆಟೋದಲ್ಲಿದ್ದ ರಾಘವೇಂದ್ರ (42) ಸಾವಿಗೀಡಾಗಿದ್ದಾರೆ. ಆಟೋದಲ್ಲಿದ್ದ ನಾಗರಾಜ್, ಪ್ರಣವ್, ಪವನ್ ಮತ್ತು ಬೈಕ್ ಹಿಂಭಾಗ ಕುಳಿತಿದ್ದ ಕುಶಾಲ್ ಗಾಯಗೊಂಡಿದ್ದಾರೆ. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಘನತ್ಯಾಜ್ಯ ವಿಲೇವಾರಿ ಘಟಕದ ಮುಂದೆ ಪ್ರತಿಭಟನೆ
ಸಾಗರ : ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆಯಿಂದ ತೊರಗೋಡು, ಅಕ್ಕಿಮನೆ, ಹುಲ್ಲತ್ತಿ, ಸಿರವಾಳ, ನೇರಲಗಿ ಸೇರಿ ಅಕ್ಕಪಕ್ಕದ ಗ್ರಾಮದ ಜನರಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿ ಘಟಕದ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೊಳಚೆ ನೀರು ರೈತರ ಜಮೀನು, ಜನವಸತಿ ಪ್ರದೇಶದಲ್ಲಿ ಹರಿದು ಹೋಗುತ್ತಿದೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇನಾಂ ಭೂಮಿಯಲ್ಲಿ ರೈತರ ಪ್ರತಿಭಟನೆ
ಶಿಕಾರಿಪುರ : ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದ ಇನಾಂ ಭೂಮಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ನೀಡಿದ್ದ ಅವಕಾಶವನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ವಿರೋಧಿಸಿರುವ ರೈತರು, ಅರ್ಜಿ ಸಲ್ಲಿಕೆಗೆ ಮತ್ತೆ ಅವಕಾಶ ನೀಡುವಂತೆ ಒತ್ತಾಯಿಸಿ ಸಮೀಪದ ಬೇಗೂರು ಇನಾಂ ಜಮೀನಿನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಕಚೇರಿಯಲ್ಲಿ ಈ ಕುರಿತ ಮನವಿ ಸಲ್ಲಿಸಲಾಯಿತು. ರೈತಮುಖಂಡ ಎಚ್.ಪಿ. ಕೃಷ್ಣೋಜಿರಾವ್, ಕೆ.ಎಚ್. ಪುಟ್ಟಸ್ವಾಮಿ, ಪರಶುರಾಮ್ ಸೇರಿ ಹಲವರಿದ್ದರು.
ಪುನೀತ್ ರಾಜ್ಕುಮಾರ್ ಜನ್ಮದಿನಾಚರಣೆ
ಶಿಕಾರಿಪುರ : ಪಟ್ಟಣದ ಬಸ್ ನಿಲ್ದಾಣದ ಬಳಿ ನಟ ಪುನೀತ್ ರಾಜ್ಕುಮಾರ್ 50ನೇ ಹುಟ್ಟುಹಬ್ಬ ಆಚರಿಸಲಾಯಿತು. ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ವತಿಯಿಂದ ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು. ಇದೇ ವೇಳೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎ.ಸಿ.ಎಫ್ ರವೀಂದ್ರ ನಾಯ್ಕ್, ಡಿ.ಆರ್.ಎಫ್.ಒ ಪ್ರಮೋದ್.ಕೆ, ಅಭಿಮಾನಿ ಬಳಗದ ಆರ್.ರಾಜಕುಮಾರ್, ವೈಭವ್ ಸೇರಿ ಹಲವರು ಇದ್ದರು.
ಬಂಕಸಾಣದಲ್ಲಿ ರೇಣುಕಾಚಾರ್ಯರ ಜಯಂತ್ಯುತ್ಸವ
ಆನವಟ್ಟಿ : ಬಂಕಸಾಣದ ಸಮಾಧಾನ ಮಠದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಸಂಸ್ಕಾರ, ಜ್ಞಾನ, ಸಜ್ಜನಿಕೆ, ದೇಶಾಭಿಮಾನ ಸೇರಿದಂತೆ ಆದರ್ಶಯುತ ಗುಣಗಳನ್ನು ಕಲಿಸಬೇಕು. ಇಲ್ಲದಿದ್ದರೆ ನೀವು ಕಷ್ಟಪಟ್ಟು ಗಳಿಸಿದ ಆಸ್ತಿ ವ್ಯರ್ಥವಾದಂತೆ ಎಂದು ಘನಬಸವ ಅಮರೇಶ್ವರ ಸ್ವಾಮೀಜಿ ತಿಳಿಸಿದರು.
ಸಾಮಾಜಿಕ ನಾಟಕ ಪ್ರದರ್ಶನ
ಚಂದ್ರಗುತ್ತಿ : ಕಮರೂರು – ಭದ್ರಾಪುರ ಗ್ರಾಮದಲ್ಲಿ ಶ್ರೀ ಗ್ರಾಮದೇವರು ಮತ್ತು ಪರಿವಾರ ದೇವರ ಪಂಚಲೋಹ ಹಾಗೂ ನಾಗದೇವರ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಅಂಗವಾಗಿ ಸಾಮಾಜಿಕ ನಾಟಕ ಆಯೋಜಿಸಲಾಗಿತ್ತು. ಹೆಚ್.ಗಣಪತಿ ಹುಲ್ತಿಕೊಪ್ಪ ನಾಟಕಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಮನದ ಕಡಲು ಟೀಮ್ ಜೊತೆಗೆ ಪ್ರೆಸ್ ಮೀಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200