ಶಿವಮೊಗ್ಗ: ಕೆಎಸ್ಆರ್ಟಿಸಿ ಬಸ್ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ 50 ಸಾವಿರ ರೂ. ಹಣ (Money) ಕಳ್ಳತನ ಮಾಡಲಾಗಿದೆ. ಗೋಪಾಳದ ಪರಮೇಶ್ವರಪ್ಪ ಎಂಬುವವರ ಜೇಬಿನಲ್ಲಿದ್ದ ಹಣ ಕಳುವಾಗಿದೆ.
ಪರಮೇಶ್ವರಪ್ಪ ಕೃಷಿ ಪಂಪ್ ಸೆಟ್ ಖರೀದಿಗೆಂದು ಬ್ಯಾಂಕ್ನಿಂದ 50 ಸಾವಿರ ರೂ. ಹಣ ಬಿಡಿಸಿಕೊಂಡು ಬಂದಿದ್ದರು. ಹೊನ್ನಾಳಿಗೆ ತೆರಳಬೇಕಿದ್ದರಿಂದ ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್ ಹತ್ತುವಾಗ ರಶ್ ಇತ್ತು. ಆದರೂ ಪರಮೇಶ್ವರಪ್ಪ ಅವರು ಬಸ್ ಏರಿ, ಸೀಟ್ ಹಿಡಿದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಸ್ಸು ನಿಲ್ದಾಣದಿಂದ ಹೊರಟು ಸ್ವಲ್ಪ ದೂರ ಬಂದಿದ್ದು, ಪರಮೇಶ್ವರಪ್ಪ ಟಿಕೆಟ್ ಮಾಡಿಸಲು ಹಣ ತೆಗೆಯಲು ಜೇಬಿಗೆ ಕೈ ಹಾಕಿದಾಗ ಹಣ ಇರಲಿಲ್ಲ. ಕೂಡಲೆ ಬಸ್ ಇಳಿದು ನಿಲ್ದಾಣಕ್ಕೆ ಹಿಂತಿರುಗಿ ಹುಡುಕಿದರೂ ಹಣ ಸಿಕ್ಕಿರಲಿಲ್ಲ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಳೆ, ತುಸು ತಂಪಾದ ವಾತಾವರಣ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?


