ರೈಲ್ವೆ ಸುದ್ದಿ: ಹುಬ್ಬಳ್ಳಿಯ ರೈಲ್ವೆ ಸೌಧಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿದ್ದರು. ನೈಋತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥೂರ್ ಅವರನ್ನು ಭೇಟಿಯಾಗಿ ವಿವಿಧ ರೈಲ್ವೆ ಯೋಜನೆಗಳ (Railway) ಕುರಿತು ಚರ್ಚೆ ನಡೆಸಿದರು.
ಸಂಸದ ರಾಘವೇಂದ್ರ ಏನೆಲ್ಲ ಚರ್ಚಿಸಿದರು?
ಶಿವಮೊಗ್ಗದಿಂದ ಮಂಗಳೂರು ಮತ್ತು ಹುಬ್ಬಳ್ಳಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವ ರೈಲು ಯೋಜನೆಗಳ ಸಮೀಕ್ಷೆ ನಡೆಸಿ, ಶೀಘ್ರ ಕಾಮಗಾರಿ ಆರಂಭಿಸಬೇಕು. ಇದರಿಂದ ಅಕ್ಕಪಕ್ಕದ ಜಿಲ್ಲೆಯ ಜನರಿಗು ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ಮನವಿ ಮಾಡಿದರು.
ಹೊಸ ಮಾರ್ಗದ ಸರ್ವೆ
ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರು, ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಚಿಕ್ಕಮಗಳೂರು ಮತ್ತು ಹಾಸನ, ತಾಳಗುಪ್ಪ ಸಿದ್ಧಾಪುರ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ, ಭದ್ರಾವತಿಯಿಂದ ಚಿಕ್ಕಜಾಜೂರಿಗೆ ನೂತನ ರೈಲ್ವೆ ಮಾರ್ಗ ಕುರಿತು ಶೀಘ್ರ ಸರ್ವೆ ಕಾರ್ಯ ನಡೆಸಬೇಕು. ಮಧ್ಯ ಕರ್ನಾಟಕದಿಂದ ಕರಾವಳಿ ಪ್ರದೇಶಕ್ಕೆ ತಾಳಗುಪ್ಪದಿಂದ ಹೊನ್ನಾವರಕ್ಕೆ ಈ ಹಿಂದೆ ಸರ್ವೇ ಕಾರ್ಯವಾಗಿದೆ. ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕು. ಇದನ್ನು ಪ್ರಥಮ ಆದ್ಯತೆ ಮೇಲೆ ಪರಿಗಣಿಸಬೇಕು ಎಂದು ಸಂಸದ ರಾಘವೇಂದ್ರ ಮನವಿ ಮಾಡಿದರು.

ಅಭಿವೃದ್ಧಿ ಕಾಮಗಾರಿಗಳು ಡಿಮಾಂಡ್
ಶಿವಮೊಗ್ಗದಿಂದ ಬೀರೂರಿನವರೆಗೆ ದ್ವಿಪಥ ರೈಲ್ವೆ ಹಳಿಗಳ ಜೋಡಣೆ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.
ಶಿವಮೊಗ್ಗದ ಕೋಟೆಗಂಗೂರಿನಲ್ಲಿ ನೂತನ ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಕುಡಿಯುವ ನೀರು ಪೂರೈಕೆ, ರೈಲುಗಳ ಸ್ವಚ್ಛತೆಗೆ ಮತ್ತು ಇತ್ಯಾದಿ ಕಾರ್ಯಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇದ್ದ ಗೂಡ್ಸ್ ಶೆಡ್ ಪ್ಲಾಟ್ ಫಾರಂ 4 ಮತ್ತು 5ನ್ನು ಮುಂದೆ ಕೋಟೆಗಂಗೂರಿಗೆ ಸ್ಥಳಾಂತರಿಸಿ, ಪ್ಲಾಟ್ ಫಾರಂ 4 ಮತ್ತು 5 ನ್ನು ಪ್ರಯಾಣಿಕ ರೈಲುಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಇದರಿಂದ ನೂತನ ರೈಲುಗಳು ನಿಲ್ಲುವುದರಿಂದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಕಾರು, ಬೈಕ್ ಖರೀದಿ ಜೋರು, ಕಾರಿನ ದರ ಎಷ್ಟು ಕಡಿಮೆಯಾಗಿದೆ? ಬೈಕ್ ರೇಟ್ ಎಷ್ಟು ಇಳಿದಿದೆ?
ಹಾರನಹಳ್ಳಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನ್ನು ಅಭಿವೃದ್ಧಿಪಡಿಸಬೇಕು. ಭದ್ರಾವತಿ ಮತ್ತು ಆನಂದಪುರಂ ರೈಲ್ವೆ ನಿಲ್ದಾಣಗಳನ್ನು ಗತಿಶಕ್ತಿ ಅಮೃತ್ ಭಾರತ್-2 ರಲ್ಲಿ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಬೇಕು.
ಶಿಕಾರಿಪುರದಿಂದ ರಾಣೇಬೆನ್ನೂರಿನ ನೂತನ ರೈಲು ಮಾರ್ಗದ ಟೆಂಡರ್ ಪ್ರಕ್ರಿಯೆ ತಕ್ಷಣ ಕರೆದು ಕಾಮಗಾರಿ ಚುರುಕುಗೊಳಿಸಬೇಕು.

ಪ್ರಯಾಣಿಕರ ಸೌಲಭ್ಯಗಳ ವಿಸ್ತರಣೆ
ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಸಂಖ್ಯೆ 20651 & 20652 ಕ್ಕೆ ಹಾಗೂ ಶಿವಮೊಗ್ಗ-ಯಶವಂತಪುರ ರೈಲು ಸಂಖ್ಯೆ 16579 & 16580 ಕ್ಕೆ ಒಂದು ಹವಾನಿಯಂತ್ರಿತ ಬೋಗಿ ಅಳವಡಿಸಬೇಕು.
ಶಿವಮೊಗ್ಗ ಯಶವಂತಪುರ ರೈಲು ಗಾಡಿ ಸಂಖ್ಯೆ 16581 & 16582 ವಾರದ 3 ದಿನಗಳು ಮಾತ್ರ ಸಂಚರಿಸುತ್ತಿದ್ದು, ಪ್ರತಿ ದಿನ ಸಂಚರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ತಾಳಗುಪ್ಪ ಬೆಂಗಳೂರು ಇಂಟರ್ ಸಿಟಿ ರೈಲು (20651 & 20652) ಅರಸಾಳು ಮತ್ತು ಕುಂಸಿ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರಿಗೆ ಹತ್ತಲು ಅನುಕೂಲ ಮಾಡಿಕೊಡಬೇಕು.

ಶಿವಮೊಗ್ಗದಿಂದ ಹಾಸನ ಮಾರ್ಗವಾಗಿ ಮೈಸೂರಿಗೆ ಪ್ರತಿ ರಾತ್ರಿ 11.30 ಕ್ಕೆ ಒಂದು ಹೊಸ ರೈಲನ್ನು ನೀಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಂಸದ ರಾಘವೇಂದ್ರ ಮನವಿ ಸಲ್ಲಿಸಿದರು.
ಸಭೆಯಲ್ಲಿ ರೈಲ್ವೆಯ ಇಲಾಖೆಯ ಮುಖ್ಯ ಪ್ರಧಾನ ಇಂಜಿನಿಯರ್ ಸಿ.ಎಂ ಗುಪ್ತಾ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಪ್ರಶಾಂತ್, ವಿಭಾಗೀಯ ಜನರಲ್ ಮ್ಯಾನೇಜರ್ ಕುಲದೀಪ್, ಡಿ.ಆರ್.ಸಿ ಸದಸ್ಯರಾದ ಪೀರ್ ಪಾಷಾ ರವರು ಹಾಜರಿದ್ದರು.

MP discuss about Railway projects







