ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2025-28ನೇ ಅವಧಿಯ ಆಡಳಿತ ಮಂಡಳಿ ಚುನಾವಣೆಗೆ (Election) ಅ.13ರಂದು ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಸಂಘದ ಮುಖ್ಯ ಚುನಾವಣೆ ಅಧಿಕಾರಿ ಎನ್.ರವಿಕುಮಾರ್ ತಿಳಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್, ಕಾರ್ಮಿಕ ಇಲಾಖೆ ಉಸ್ತುವಾರಿಯಲ್ಲಿ ಸಂಘದ ರಾಜ್ಯ ಘಟಕವೂ ಸೇರಿದಂತೆ ಎಲ್ಲ ಜಿಲ್ಲಾ ಘಟಕದ ಆಡಳಿತ ಮಂಡಳಿಗೆ ಒಂದೆ ಬಾರಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಎಂದರು.
ರವಿಕುಮಾರ್ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್
ಅ.13ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಅದೇ ದಿನ ವೇಳಾಪಟ್ಟಿ ಹಾಗೂ ಮತದಾರರ ಕರಡು ಪ್ರತಿ ಪ್ರಕಟಿಸಲಾಗುವುದು.
ನಾಮಪತ್ರ ಸಲ್ಲಿಕೆ ಅ. 19ರಿಂದ ಆರಂಭವಾಗಲಿದ್ದು, ಅ.27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅ.28 ನಾಮಪತ್ರಗಳ ಪರಿಶೀಲನೆ, ಅ.30 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ.

ನವೆಂಬರ್ 9ರಂದು KUWJ ಕಚೇರಿ ಕಂದಾಯ ಭವನ 3ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು ಮತ್ತು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3ರವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತ ಎಣಿಕೆ ನಡೆಸಿ, ಫಲಿತಾಂಶ ಪ್ರಕಟಿಸಲಾಗುವುದು.
ಪತ್ರಕರ್ತರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಅ.10ರಿಂದ ನವೆಂಬರ್ 9ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಘಟಕಗಳು ಯಾವುದೆ ಅಧಿಕೃತ ಸಭೆ, ಸಮಾರಂಭ ನಡೆಸುವಂತಿಲ್ಲ. ಜಾತಿ, ಧರ್ಮ, ಲಿಂಗ ಆಧಾರಿತವಾಗಿ ಮತ ಯಾಚಿಸುವಂತಿಲ್ಲ. ಪ್ರತಿಸ್ಪರ್ಧಿಯ ವಿರುದ್ಧ ವ್ಯಕ್ತಿಗತ ಆರೋಪ, ಅಪಪ್ರಚಾರ ನಡೆಸುವಂತಿಲ್ಲ.
Election


