SHIMOGA : ದೀಪಾವಳಿ ಸಂದರ್ಭ ಮಲೆನಾಡಿನಲ್ಲಿ ಅಂಟಿಗೆ ಪಂಟಿಗೆ (Antige Pantige) ಜ್ಯೋತಿ ಕೊಂಡೊಯ್ಯುವ ಸಂಪ್ರದಾಯ ನಡೆಯಲಿದೆ. ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಶಿವಮೊಗ್ಗ ನಗರದ ವಿವಿಧ ಬಡಾವಣೆಯ ಮನೆಗಳಿಗೆ ಅಂಟಿಗೆ ಪಂಟಿಗೆ ಜ್ಯೋತಿ ಕೊಂಡೊಯ್ಯಲಾಯಿತು. ಈ ಮೂಲಕ ನಗರದ ಪ್ರದೇಶದ ಜನರಿಗು ಅಂಟಿಗೆ ಪಂಟಿಗೆ ಪರಿಚಯಿಸುವ ಪ್ರಯತ್ನವಾಯಿತು.
ಆದಿಚುಂಚನಗಿರಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಅಂಟಿಗೆ ಪಂಟಿಗೆ (Antige Pantige) ತಂಡಗಳಿಗೆ ಚಾಲನೆ ನೀಡಲಾಯಿತು. ಶಿವಮೊಗ್ಗ ಶಾಖಾ ಮಠದ ನಾದನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಕಾಲಭೈರವೇಶ್ವರ ದೇವಸ್ಥಾನದಿಂದ ಸಂಜೆ ಹೊರಟ ತೀರ್ಥಹಳ್ಳಿಯ ಬಾಂದ್ಯಾದ 2 ತಂಡಗಳನ್ನು ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಸಂಭ್ರಮದಿಂದ ಬರಮಾಡಿಕೊಂಡರು. ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ಅಂಟಿಗೆ ಪಂಟಿಗೆ ತಂಡ ಬೆಳಗಿನ ಜಾವದವರೆಗೂ ತೆರಳಿತು.
ಗಮನ ಸೆಳೆದ ಅಂಟಿಗೆ ಪಂಟಿಗೆ ಪದ
ಮನೆಗಳಿಗೆ ತೆರಳಿ ದೀಪ ನೀಡಿ ಅಂಟಿಗೆ ಪಂಟಿಗೆ ಪದಗಳ ಗಮನ ಸೆಳೆಯಿತು. ‘ದೀಪೋಳಿ ಎನ್ನಿರಣ್ಣಾ ..ಈ ಊರ ದೇವ್ರಿಗೆ’ , ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎನ್ನುತ್ತಾ ಶುಭಹಾರೈಸಿದರು. ಅಂಟಿಕೆ ಪಂಟಿಗೆಯ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸಿದರು. ಹೀಗೆ ದೀಪ ಬೆಳಗಿದ ಮನೆಯಲ್ಲಿ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ನಂಬಿಕೆಯಿದೆ.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಡಿ.ಗಣೇಶ್, ಪಿ.ಕೆ.ಸತೀಶ್, ಭೈರಾಪುರ ಶಿವಪ್ಪಗೌಡ, ನಾರಾಯಣ, ಅಮೀಶ್ ಉಪಸ್ಥಿತರಿದ್ದರು.

ಇದನ್ನೂ ಓದಿ » ವಾರಸುದಾರರು ಇಲ್ಲದ ಬ್ಯಾಂಕ್ ಠೇವಣಿ ಹಸ್ತಾಂತರಕ್ಕೆ ಶಿವಮೊಗ್ಗದಲ್ಲಿ ವಿಶೇಷ ಶಿಬಿರ