ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ರೈಲ್ವೆ ಸೇತುವೆ ಮೇಲಿಂದ ತುಂಗಾ ನದಿಗೆ ಹಾರಿದ್ದಾರೆ. ಸದ್ಯ ಒಂದು ಮಗು ಮತ್ತು ತಾಯಿಯನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ಮಕ್ಕಳಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದರು. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.
ಚಿತ್ರದುರ್ಗ ಮೂಲದ ಭವಾನಿ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹರಿದ್ದರು. ಇದನ್ನು ಗಮನಿಸಿದ ಯುವಕ ನದಿಗೆ ಹಾರಿ ಭವಾನಿ ಮತ್ತು ಗಂಡು ಮಗುವನ್ನು ರಕ್ಷಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ.

ಜೀವದ ಹಂಗು ತೊರೆದು ರಕ್ಷಣೆ
ಭವಾನಿ, ಸಾನ್ವಿಕಾ (6), ತನ್ವಿಕಾ (4) ಮತ್ತು ಹನ್ನೊಂದು ತಿಂಗಳ ಗಂಡು ಮಗುವಿನೊಂದಿಗೆ ರೈಲ್ವೆ ಹಳಿ ಮೇಲೆ ಹೋಗುವುದನ್ನು ನವೀನ್ ಎಂಬುವವರು ಗಮನಿಸಿದ್ದರು. ಹಳಿಯ ಮೇಲೆ ಹೋಗದಂತೆ ಕೂಗಿ ಹೇಳಿದ್ದರು. ಅಷ್ಟರಲ್ಲಿ ಭವಾನಿ, ಇಬ್ಬರು ಹೆಣ್ಮಕ್ಕಳನ್ನು ನದಿಗೆ ತಳ್ಳಿ ಗಂಡು ಮಗುವಿನ ಜೊತೆಗೆ ತಾನು ಹೊಳೆಗೆ ಹಾರಿದ್ದರು. ಇದನ್ನು ಗಮನಿಸಿದ ನವೀನ್ ಕೂಡಲೆ ನದಿಗೆ ಹಾರಿ ತಾಯಿ ಮತ್ತು ಗಂಡು ಮಗುವನ್ನು ರಕ್ಷಿಸಿದ್ದಾರೆ.
ಮೊದಲು ಇಬ್ಬರು ಮಕ್ಕಳನ್ನು ನದಿಗೆ ಎಸೆದರು. ಮತ್ತೊಂದು ಮಗುವನ್ನು ಹಿಡಿದುಕೊಂಡು ನದಿಗೆ ಹಾರಿದ್ದರು. ರಕ್ಷಣೆ ಮಾಡುವಾಗಲು ಆ ಮಗು ಕಂಕುಳಲ್ಲಿಯೇ ಇತ್ತು.
– ನವೀನ್, ರಕ್ಷಣೆ ಮಾಡಿದ ಯುವಕ
ತುಂಗಾ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ
ವಿಷಯ ತಿಳಿಯುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕಳೆದ ಎರಡು ದಿನದಿಂದ ಮಳೆಯಾಗುತ್ತಿರುವ ಹಿನ್ನೆಲೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಇನ್ನು, ದಟ್ಟ ಕತ್ತಲು ಆವರಿಸಿರುವ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಈ ಹಿನ್ನೆಲೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದರು.
ಚಿತ್ರದುರ್ಗ ಮೂಲದ ಮಹಿಳೆ
ಭವಾನಿ ಮೂಲತಃ ಚಿತ್ರದುರ್ಗದವರು. ಪತಿ ದುಗ್ಗಪ್ಪ ಜೆಸಿಬಿ ಆಪರೇಟರ್ ಕೆಲಸ ಮಾಡುತ್ತಿದ್ದಾರೆ. ಸವಳಂಗದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಇಂದು ಸಂಜೆ ಭವಾನಿ ತನ್ನ ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ್ದಾರೆ. ಕೌಟುಂಬಿಕ ಕಲಹ ಘಟನೆಗೆ ಕಾರಣವಾಗಿರಬಹುದು ಎಂದು ಸ್ಥಳದಲ್ಲಿದ್ದ ಅವರ ಸಂಬಂಧಿ ರಾಕೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಭವಾನಿ ಮತ್ತು ಹನ್ನೊಂದು ತಿಂಗಳ ಗಂಡು ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.