‘ಶಿವಮೊಗ್ಗಕ್ಕೆ ಇನ್ನೂ ₹100 ಕೋಟಿ ಬರಬೇಕಿತ್ತು’, ಸಂಸದ ರಾಘವೇಂದ್ರ ಆಕ್ರೋಶ, ಆಗಿದ್ದೇನು?

ಶಿವಮೊಗ್ಗ: ಮಳೆ ಮಾಪನ ಕೇಂದ್ರಗಳ ಅವ್ಯವಸ್ಥೆ ಹಾಗೂ ವಿಮಾ ಕಂಪನಿಯ ನಿಯಮಾವಳಿಗಳಿಂದ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಗೆ ವಿಮಾ ಮೊತ್ತ ಅತ್ಯಂತ ಕಡಿಮೆ ನಿಗದಿಪಡಿಸಿದ್ದು, ರೈತರಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ವಿನೋಬನಗರದ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಅಡಿಕೆ, ಮಾವು, ಕಾಳುಮೆಣಸು ಹಾಗೂ ಶುಂಠಿ ಬೆಳೆಯುವವರು ಸೇರಿದಂತೆ ಶಿವಮೊಗ್ಗ ಜಿಲ್ಲೆಯ 89,611 ರೈತರಿಗೆ ₹113.23 ಕೋಟಿ ಮೊತ್ತದ ವಿಮಾ ಮೊತ್ತ ಬಿಡುಗಡೆ ಆಗಿದೆ. ಆದರೆ ನ್ಯಾಯಬದ್ಧವಾಗಿ ವಿಮೆ ನಿಗದಿಪಡಿಸಿದ್ದರೆ ಜಿಲ್ಲೆಗೆ ಇನ್ನೂ ₹100 ಕೋಟಿಯಷ್ಟು ಮೊತ್ತ ಬಿಡುಗಡೆ ಆಗಬೇಕಿತ್ತು ಎಂದರು. 

ಶೇ.50ರಷ್ಟು ಮಾಪನ ಕೇಂದ್ರ ಕೆಟ್ಟಿವೆ

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ಇವೆ. ಅದರಲ್ಲಿ ಶೇ.50ರಷ್ಟು ಕೆಟ್ಟುಹೋಗಿವೆ. ಮಳೆ ಮಾ‍ಪನ ಕೇಂದ್ರಗಳ ಉಪಕರಣಗಳಿಗೆ ತುಕ್ಕು ಹಿಡಿಯಬಾರದು ಎಂಬ ಕಾರಣಕ್ಕೆ ಕೆಲವು ಕಡೆ ಚಾವಣಿ ಅಳವಡಿಸಲಾಗಿದೆ. ಈ ಹೊತ್ತಿನಲ್ಲಿ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಪ್ರಮಾಣ ಆಧರಿಸಿ ವಿಮಾ ಮೊತ್ತ ನಿಗದಿಪಡಿಸಬೇಕಿದೆ. ಆದರೆ ಅತಿ ಕಡಿಮೆ ಮಳೆ ಬಿದ್ದ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಅತ್ಯಂತ ಕಡಿಮೆ ವಿಮಾ ಮೊತ್ತ ನಿಗದಿಪಡಿಸಿದ್ದು, ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Nanjappa Hospital Advertisement

BY-Raghavendra-Press-meet-in-Shimoga-city

ವಿಮಾ ಕಂಪನಿಗೆ ಅನುಕೂಲಕರ ನೀತಿ

ವಿಮಾ ಕಂಪನಿ ಮೂರು ವರ್ಷಕ್ಕೊಮ್ಮೆ ಬದಲಾಯಿಸುವ ಟರ್ಮ್‌ ಶೀಟ್‌ನಲ್ಲಿ ವಿಮಾ ಮೊತ್ತ ನಿಗದಿಗೆ ಸತತ ಎಂಟು ದಿನ 3 ಸೆಂಟಿ ಮೀಟರ್‌ ಮಳೆ ಬರಬೇಕು ಎಂದಿದೆ. ಅದಕ್ಕೂ ಹಿಂದಿನ ಟರ್ಮ್‌ ಶೀಟ್‌ನಲ್ಲಿ ಸತತ ಐದು ದಿನ 3 ಸೆಂಟಿ ಮೀಟರ್‌ ಮಳೆ ಇರಬೇಕು ಎಂದು ಇತ್ತು. ಈಗ ಅದನ್ನು ಎಂಟು ದಿನಕ್ಕೆ ವಿಸ್ತರಿಸಿದ್ದು ಏಕೆ? ಕಂಪನಿಗೆ ಅನುಕೂಲಕರ ರೀತಿಯಲ್ಲಿ ನಿಯಮಾವಳಿ ಬದಲಾಯಿಸಿಕೊಳ್ಳಲಾಗಿದೆ ಎಂದು ದೂರಿದರು.  

ರೈತರಿಗೆ ಅನ್ಯಾಯವಾಗಿದೆ

ಜಿಲ್ಲೆಗೆ ಓರಿಯಂಟಲ್‌ ಕಂಪನಿ ವಿಮಾ ಮೊತ್ತ ನಿಗದಿಪಡಿಸಿದ್ದು, ಅದನ್ನು ರಾಜ್ಯ ಸರ್ಕಾರವೇ ಆಯ್ಕೆ ಮಾಡಿದೆ. ಕಂಪನಿಗೆ ಪೂರಕವಾಗಿ ವಿಮಾ ಮೊತ್ತ ನಿಗದಿಪಡಿಸಿರುವುದರಿಂದ ಬಹಳಷ್ಟು ರೈತರಿಗೆ ಎಕರೆಗೆ ₹500 ಮಾತ್ರ ವಿಮಾ ಮೊತ್ತ ಜಮಾ ಆಗಿದೆ. ಕೆಲವು ಕಡೆ ರೈತರು ಕಟ್ಟಿದ ಕಂತಿನ (ಪ್ರೀಮಿಯಂ) ಮೊತ್ತ ಕೂಡ ಬಂದಿಲ್ಲ. ಸಾಗರದ ನಿಟ್ಟೂರು, ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳ ರೈತರಿಗೆ ಹೆಚ್ಚಿನ ಅನ್ಯಾಯವಾಗಿದೆ ಎಂದು ತಿಳಿಸಿದರು. 

ಇದನ್ನೂ ಓದಿ » ಸೌಂದರ್ಯ ವರ್ಧನೆ, ಕೂದಲು ಕಸಿ ಮಾಡಿಸಿಕೊಳ್ಳುವವರೆ ಹುಷಾರ್‌, ಶಿವಮೊಗ್ಗದಲ್ಲಿ ವೈದ್ಯರ ಎಚ್ಚರಿಕೆ

ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಕೆ.ಜಗದೀಶ್, ಪಕ್ಷದ ಮುಖಂಡರಾದ ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ನವೀನ್, ಮ್ಯಾಮ್ಕೋಸ್ ಅಧ್ಯಕ್ಷ ಮಹೇಶ್, ರಾಜೇಶ್ ಕಾಮತ್, ಸಂತೋಷ್, ಶಿವರಾಜ್, ಮಾಲತೇಶ್ ಹಾಜರಿದ್ದರು.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment