ಶಿವಮೊಗ್ಗ: ಬೊಮ್ಮನಕಟ್ಟೆಯಲ್ಲಿ ಮತ್ತೊಂದು ಮನೆ ಕಳ್ಳತನ (house burglary) ಪ್ರಕರಣ ವರದಿಯಾಗಿದೆ. ಅಶ್ರಯ ಬಡಾವಣೆಯ ಬಿ ಬ್ಲಾಕ್ನ ಭರತ್ ಎಂಬುವವರ ಮನೆಯಲ್ಲಿ ಸುಮಾರು ₹2.60 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಭರತ್ ಅವರು ಮಾರ್ಚ್ 27ರಂದು ಮನೆಗೆ ಬೀಗ ಹಾಕಿಕೊಂಡು ಭದ್ರಾವತಿಯಲ್ಲಿರುವ ಅತ್ತೆ ಮನೆಗೆ ಹೋಗಿದ್ದರು. ಮಾರ್ಚ್ 28ರಂದು ಬೆಳಗ್ಗೆ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಮನೆಯ ಕಿಟಕಿ ಗಾಜು ಹಾಗೂ ಬಾಗಿಲನ್ನು ಒಡೆದು ಒಳ ನುಗ್ಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮನೆಯ ಬೀರುವಿನಲ್ಲಿದ್ದ ಸುಮಾರು 28 ಗ್ರಾಂ ತೂಕದ ಚಿನ್ನದ ಸರ, ತಾಳಿ, ಓಲೆ, ಉಂಗುರ ಹಾಗೂ 150 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್ ಸೇರಿದಂತೆ ಒಟ್ಟು ₹2,60,000 ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


