ಭದ್ರಾವತಿ: ಎದುರು ಮನೆಗೆ ನುಗ್ಗಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿಗೆ ಭದ್ರಾವತಿಯ ನ್ಯಾಯಾಲಯವು ಜೈಲು ಶಿಕ್ಷೆ (prison) ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2021ರ ಅಕ್ಟೋಬರ್ 3 ರಂದು ಭದ್ರಾವತಿಯ ಹಳೇನಗರದ ನೇತಾಜಿ ರಸ್ತೆ 1ನೇ ಕ್ರಾಸ್ ನಿವಾಸಿ ಅಹ್ಮದ್ ಷರೀಫ್ (34) ತನ್ನ ಎದುರು ಮನೆಯ ನಿವಾಸಿ ಮಹಮ್ಮದ್ ಸಾಬ್ ರವರ ಮನೆಗೆ ನುಗ್ಗಿದ್ದ. ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದ. ಈ ಕುರಿತು ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಳೇನಗರ ಪಿಎಸ್ಐ ಈರೇಶ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಅಪರಾಧ ದೃಢಪಟ್ಟಿದೆ. ಈ ಹಿನ್ನೆಲೆ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ KSRTC ನಿಲ್ದಾಣದಲ್ಲಿ ಭದ್ರಾವತಿ ಮಹಿಳೆಯ ಭಾರಿ ಮೊತ್ತದ ಚಿನ್ನಾಭರಣ ಕಳ್ಳತನ

ಅಹ್ಮದ್ ಷರೀಫ್ಗೆ 1 ವರ್ಷ ಸಾಧಾರಣ ಕಾರಾವಾಸ ಶಿಕ್ಷೆ, ₹2,000 ದಂಡ ವಿಧಿಸಿ ಆದೇಶ ನೀಡಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
