ಶಿವಮೊಗ್ಗ: ಸಂಸತ್ತು ಮತ್ತು ರಾಜ್ಯಗಳ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ (women) ಶೇ.33ರಷ್ಟು ಮೀಸಲು ನೀಡುವ ನಾರಿಶಕ್ತಿ ವಂದನಾ ಅಧಿನಿಯಮ ಜಾರಿಗೆ ತಂದಿರುವುದು ಐತಿಹಾಸಿಕ ಹೆಜ್ಜೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲು ಕಾಯಿದೆಗೆ ತಿದ್ದುಪಡಿ ತಂದು, 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಮಾಡಿ ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಗುರುವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಕಾಯಿದೆಯ ಕುರಿತು ಚರ್ಚೆ ನಡೆಯಲಿದೆ. ಇದು ಮಹಿಳಾ ಶಕ್ತಿಗೆ ಸಲ್ಲಿಸುವ ಗೌರವವಾಗಿದೆ ಎಂದರು.


ಕ್ಷೇತ್ರ ಮರುವಿಂಗಡಣೆ ನಂತರ ಲೋಕಸಭೆ ಸದಸ್ಯರ ಸಂಖ್ಯೆ 543ರಿಂದ 850ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಸುಮಾರು 270 ಸ್ಥಾನಗಳು ಮಹಿಳೆಯರ ಪಾಲಾಗಲಿವೆ. ಬಸವ ಜಯಂತಿಯ ಈ ಸಂದರ್ಭ ಬಸವಣ್ಣನವರ ಸಮ ಸಮಾಜದ ಕನಸು ಹಾಗೂ ಮಹಿಳೆಯರಿಗೆ ಸಮಾನತೆ ನೀಡುವ ಆಶಯ ಕಾಯಿದೆಯ ಮೂಲಕ ನನಸಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್ ಸೇರಿದ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ : ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?
