ಶಿವಮೊಗ್ಗ: ಫೇಸ್ಬುಕ್ನಲ್ಲಿ ಪರಿಚಯವಾದ (Facebook friend) ವ್ಯಕ್ತಿಯೊಬ್ಬ ಮುಂಬೈ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿಸಿ ಶಿವಮೊಗ್ಗದ ಯುವತಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಇದನ್ನೂ ಓದಿ : ಫೋನ್ ಪೇ ಮಾಡಿ ಗಾಂಧಿ ಬಜಾರ್ ಬಂಗಾರದ ವ್ಯಾಪಾರಿಯ ಖಾತೆಯನ್ನೇ ಫ್ರೀಜ್ ಮಾಡಿಸಿದ ಗ್ರಾಹಕ..!

ಖಾಸಗಿ ಕಂಪನಿಯ ಉದ್ಯೋಗಿ ಆಗಿರುವ ಯುವತಿಗೆ ಎರಡು ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಮೈಕೆಲ್ ಎಂಬಾತನ ಪರಿಚಯವಾಗಿತ್ತು. ಏಪ್ರಿಲ್ 6 ರಂದು ತನ್ನನ್ನು ಭೇಟಿಯಾಗಲು ಶಿವಮೊಗ್ಗಕ್ಕೆ ಬರುವುದಾಗಿ ಆತ ನಂಬಿಸಿದ್ದ. ಬಳಿಕ ವಾಟ್ಸಾಪ್ ಮೆಸೇಜ್ ಮಾಡಿದ್ದ ಆತ ‘ತಾನು ಮುಂಬೈ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಕಾರಣಗಳಿಂದ ಸಿಲುಕಿಕೊಂಡಿರುವುದಾಗಿ’ ತಿಳಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ಮಹಿಳೆಯೊಬ್ಬರು ಕರೆ ಮಾಡಿ ತಾನು ವಿಮಾನ ನಿಲ್ದಾಣದ ಸಿಬ್ಬಂದಿ, ಮೈಕಲ್ನನ್ನು ಬಿಡಿಸಿಕೊಳ್ಳಲು ದಂಡ ಪಾವತಿಸಬೇಕು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ನಂಬಿದ ಯುವತಿ ಏಪ್ರಿಲ್ 6 ಮತ್ತು 7 ರಂದು ವಿವಿಧ ಬ್ಯಾಂಕ್ ಖಾತೆಗಳಿಗೆ ನೆಟ್ ಬ್ಯಾಂಕಿಂಗ್ ಮತ್ತು ಫೋನ್ ಪೇ ಮೂಲಕ ಹಣ ವರ್ಗಾಯಿಸಿದ್ದರು. ಒಟ್ಟು ₹2,15,000 ಹಣ ವರ್ಗಾಯಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮತ್ತೆ ಹಣಕ್ಕಾಗಿ ಪೀಡಿಸಿದಾಗ ಅನುಮಾನಗೊಂಡ ಯುವತಿ, ಕೂಡಲೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.