ಶಿವಮೊಗ್ಗ: ‘ಡಾ. ರಾಜ್ಕುಮಾರ್ (Dr. Rajkumar) ಅವರ ಸಿನಿಮಾಗಳು ಕೇವಲ ಮನರಂಜನೆಯಲ್ಲ. ಅವು ಜೀವನದ ಪಾಠಗಳಂತಿವೆ. ಅವರ ಪ್ರತಿ ಪಾತ್ರವೂ ಸಮಾಜವನ್ನು ತಿದ್ದುವ ಮತ್ತು ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡಿವೆ,’ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಪದ್ಮಭೂಷಣ, ಕರ್ನಾಟಕ ರತ್ನ ಡಾ. ರಾಜ್ಕುಮಾರ್ ಅವರ 97ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸ್ಪೂರ್ತಿಯಾಗಿದ್ದ ಬಂಗಾರದ ಮನುಷ್ಯ
‘ಬಂಗಾರದ ಮನುಷ್ಯ ಚಿತ್ರ ನೋಡಿ ಅದೆಷ್ಟೋ ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡರು. ದೇವತಾ ಮನುಷ್ಯ, ಕಸ್ತೂರಿ ನಿವಾಸ, ಸತ್ಯ ಹರಿಶ್ಚಂದ್ರದಂತಹ ಚಿತ್ರಗಳು ನಿಸ್ವಾರ್ಥ ಸೇವೆ ಮತ್ತು ತ್ಯಾಗದ ಮೌಲ್ಯಗಳನ್ನು ಸಾರುತ್ತವೆ. ಅವರು ಕಲಾಕ್ಷೇತ್ರದ ಅತಿದೊಡ್ಡ ಶಕ್ತಿಯಾಗಿದ್ದರು,’ ಎಂದು ಸ್ಮರಿಸಿದರು.
‘ಗೋಕಾಕ್ ಚಳವಳಿ ವೇಳೆ ಶಿವಮೊಗ್ಗಕ್ಕೆ ಅಣ್ಣಾವ್ರು ಬಂದಿದ್ದ ಸಂದರ್ಭ ಮತ್ತು ಭದ್ರಾವತಿಯಲ್ಲಿ ಅಭೂತಪೂರ್ವ ಸ್ವಾಗತ ಲಭಿಸಿತ್ತುʼ ಎಂದು ಚನ್ನಬಸಪ್ಪ ಸ್ಮರಿಸಿಕೊಂಡರು.

ಐಎಎಸ್ ಸಂದರ್ಶದಲ್ಲಿ ಪ್ರಶ್ನೆ
ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಕಟ್ಟಿ ಮಾತನಾಡಿ, ‘2006ರಲ್ಲಿ ಡಾ. ರಾಜ್ಕುಮಾರ್ ನಿಧನರಾದ ನಾಲ್ಕೇ ದಿನಗಳಲ್ಲಿ ನನಗೆ ಐಎಎಸ್ ಸಂದರ್ಶನ ಇತ್ತು. ಒಬ್ಬ ನಟನಿಗಾಗಿ ಇಡೀ ರಾಜ್ಯವೇ ಈ ಮಟ್ಟಕ್ಕೆ ಕಂಬನಿ ಮಿಡಿಯಲು ಮತ್ತು ಜನ ಜಮಾಯಿಸಲು ಕಾರಣವೇನೆಂದು ಸಂದರ್ಶಕರು ಕೇಳಿದ್ದರು. ಆಗ ನಾನು ಡಾ. ರಾಜ್ ವ್ಯಕ್ತಿತ್ವದ ಬಗ್ಗೆ ವಿವರಿಸಿದೆ. ಅವರೆಲ್ಲರೂ ಅಣ್ಣಾವ್ರ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಕೇಳಿದ್ದರು,ʼ ಎಂದು ತಿಳಿಸಿದರು.
ಇದನ್ನೂ ಓದಿ : ಶಿವಮೊಗ್ಗ, ಭದ್ರಾವತಿಯಲ್ಲಿ ನಿನ್ನೆಗಿಂತಲು ಹೆಚ್ಚು ತಾಪಮಾನ, ಉಳಿದ ತಾಲೂಕುಗಳಲ್ಲಿ ಹೇಗಿರುತ್ತೆ?
ಕಾರ್ಯಕ್ರಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಕರವೇ ಕಾವಲು ಪಡೆಯ ರಾಜ್ಯಾಧ್ಯಕ್ಷ ಡಾ. ಹೆಚ್. ಸುರೇಶ್, ಎಡಿಸಿ ಅಭಿಷೇಕ್.ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಡಾ. ಶಶಿಕಾಂತ್ ಜೈನ್ ಮತ್ತು ಸಿದ್ದೇಶ್ ಅವರು ಅಣ್ಣಾವ್ರ ಗೀತೆಗಳನ್ನು ಹಾಡಿ ರಂಜಿಸಿದರು.






