ಶಿವಮೊಗ್ಗ: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು (Foundation Day) ಅಪ್ರತಿಮ ಸೇವೆ ಸಲ್ಲಿಸುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದಕ್ಕೂ ಮುನ್ನ ಕಸಾಪ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಮಿರ್ಜಾ ಇಸ್ಮಾಯಿಲ್, ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಾಹಿತ್ಯ ಪರಿಷತ್ತು ಸಾಹಿತ್ಯಕ್ಕೆ ಸೀಮಿತವಾಗದೆ, ಕನ್ನಡದ ಅಸ್ಮಿತೆಯನ್ನು ಕಾಪಾಡುವ ಶಕ್ತಿಯಾಗಿ ಬೆಳೆದು ಬಂದಿದೆ. ಜಿಲ್ಲೆಯಲ್ಲಿ ಮನೆ ಮನೆಗೆ ಸಾಹಿತ್ಯ ತಲುಪಿಸುವ ಕೆಲಸ ಕಸಾಪ ವತಿಯಿಂದ ನಡೆದಿದೆ. ಇಂತಹ ಸಾಂಸ್ಕೃತಿಕ ಸಂಸ್ಥೆಗಳ ಬಲವರ್ಧನೆಗೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಕಸಾಪ ಸ್ಥಾಪನೆಯ ಹಿಂದಿನ ಆಶಯಗಳನ್ನು ಮರೆಯಬಾರದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ರಾಜಾಶ್ರಯದಿಂದ ಆರಂಭವಾದ ಸಂಸ್ಥೆ ಇಂದು ಹೋಬಳಿಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಸಾಪ ರಾಜ್ಯಾಧ್ಯಕ್ಷ ಹುದ್ದೆಗೆ ಏರುವವರು, ಕನ್ನಡ ಸೇವೆಗಿಂತ ವೈಯಕ್ತಿಕ ಪ್ರಯೋಜನಗಳಿಗೆ ಒತ್ತು ನೀಡುತ್ತಿದ್ದಾರೆ. ಅಂತಹ ಹಿತಾಸಕ್ತಿಗಳಿಂದ ಪರಿಷತ್ತನ್ನು ಕಾಪಾಡಬೇಕಿದೆ ಎಂದು ಹೇಳಿದರು.
ಕನ್ನಡ ಶಾಲೆಗಳು ಮುಚ್ಚುತ್ತಿರುವುದು ವಿಷಾದನೀಯ. ಸರ್ಕಾರಿ ಶಾಲೆಯ ಪಕ್ಕದಲ್ಲಿ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವಂತಹ ಮನಸ್ಥಿತಿ ನಮ್ಮ ಅಧಿಕಾರಿಗಳದಾಗಿದೆ.
– ಕೆ. ಬಿ. ಪ್ರಸನ್ನಕುಮಾರ್, ಮಾಜಿ ಶಾಸಕ
ಡಿ. ವಿ. ಎಸ್. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್. ಪಿ. ದಿನೇಶ್ ಅವರು ಮಾತನಾಡಿದರು. ಇದೇ ವೇಳೆ ಕಸಾಪ ಹಿರಿಯ ಸದಸ್ಯರಾದ ಹೊಸತೋಟ ಸೂರ್ಯನಾರಾಯಣ, ಶಾಂತಾ ಆನಂದ, ಡಾ. ಕೃಷ್ಣ ಎಸ್. ಭಟ್, ಬಿ. ಡಿ. ಸಾವಕ್ಕನವರ್, ಮಧುಗಣಪತಿರಾವ್ ಮಡೆನೂರು ಅವರುಗಳನ್ನು ಅಭಿನಂದಿಸಲಾಯಿತು.
ಇದನ್ನೂ ಓದಿ : ಶಿವಮೊಗ್ಗದಲ್ಲಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ, ಆದೇಶ ಹಿಂಪಡೆಯುವಂತೆ ಆಗ್ರಹ
ಗಾಯಕರಾದ ನಳಿನಾಕ್ಷಿ, ಚಂದ್ರಶೇಖರ್, ಷರೀಫ್, ಡಾ. ನೇತ್ರಾವತಿ ಮತ್ತು ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಜಿ.ಆರ್. ಲವ, ಗಾಯತ್ರಿ ಸುರೇಂದ್ರ, ಬಾಲರಾಜ್ ಚುರ್ಚುಗುಂಡಿ ಕಥೆ ಹೇಳಿದರು. ಕವಿಗಳಾದ ಊರ್ಮಿಳಾ ರಾವ್, ಪಿ.ಕೆ.ಸತೀಶ್ , ವಾಗೀಶ್ ಆರಾಧ್ಯ ಮಠ, ಶಶಿಕಲಾ, ಗಾಯತ್ರಿ ಎಸ್. ಕೆ, ಡಾ. ನೇತ್ರಾವತಿ, ಡಾ. ಕೃಷ್ಣ ಎಸ್. ಭಟ್, ಮಧುಗಣಪತಿರಾವ್ ಮಡೆನೂರು ಕವನ ವಾಚಿಸಿದರು. ನಳಿನಾಕ್ಷಿ ಮತ್ತು ತಂಡದವರು ನಾಡಗೀತೆ ಹಾಡಿದರು.
ಎಂ. ನವೀನ್ ಕುಮಾರ್ ಸ್ವಾಗತಿಸಿ, ಎಂ. ಎಂ. ಸ್ವಾಮಿ ವಂದಿಸಿ, ಕೆ. ಎಸ್. ಮಂಜಪ್ಪ ನಿರೂಪಿಸಿದರು. ಹಿರಿಯ ಸದಸ್ಯರಾಗಿದ್ದ ಎಚ್. ಎಸ್. ಶಂಕರ್ ಅವರ ಅಗಲಿಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Why did MLA S.N. Channabasappa praise Kannada Sahitya Parishat during its 112th Foundation Day in Shivamogga? Read about the event highlights and concerns raised over Kannada schools.








