ಸಾಗರ: ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆಂದು ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಬಂದಿದ್ದ ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಶರಾವತಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ರಾಯದುರ್ಗ ನಿವಾಸಿ ಉಮೇಶ್ (30) ಮೃತ ದುರ್ದೈವಿ.
ಬುಧವಾರ ಮಧ್ಯಾಹ್ನ ಸಿಗಂದೂರು ಸೇತುವೆಯ ಕೆಳಭಾಗದ ಮುಳುಗಡೆ ಪ್ರದೇಶದಲ್ಲಿ ಉಮೇಶ್ ಈಜಾಡಲು ನೀರಿಗೆ ಇಳಿದಿದ್ದರು. ಆದರೆ, ನೀರಿನ ತೀವ್ರ ಸೆಳತಕ್ಕೆ ಸಿಲುಕಿದ ಅವರು ನಿಯಂತ್ರಣ ಸಿಗದೆ ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು. ಜೊತೆಯಲ್ಲಿದ್ದವರು ತಕ್ಷಣವೇ ಈ ಬಗ್ಗೆ ಸ್ಥಳೀಯರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸಾಗರ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಶೋಧ ಕಾರ್ಯ ಕೈಗೊಂಡರು. ಕೆಲವು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಉಮೇಶ್ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ. ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
