ಶಿವಮೊಗ್ಗ: ಆರ್ಸಿಬಿ ಕ್ರಿಕೆಟ್ ಪಂದ್ಯ ಗೆದ್ದಿದ್ದಕ್ಕೆ ಪಟಾಕಿ ಹೊಡೆಯುತ್ತಿದ್ದ ಮಕ್ಕಳಿಗೆ, ತೊಂದರೆ ನೀಡುತ್ತಿದ್ದ ಯುವಕರನ್ನು ತಡೆದವರ ಮೇಲೆ, ಗುಂಪೊಂದು ಹಲ್ಲೆ ನಡೆಸಿದೆ. ರಾಗಿಗುಡ್ಡದಲ್ಲಿ ಈ ಘಟನೆ ಸಂಭವಿಸಿದೆ. ಹಲ್ಲೆಯಿಂದ ಗಾಯಗೊಂಡ ಮಲ್ಲಿಕಾರ್ಜುನ ನಗರದ ಗಣೇಶ್.ಎಸ್ (30) ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಮೇ 31ರ ರಾತ್ರಿ ಗಣೇಶ್ ಮತ್ತು ಸ್ನೇಹಿತ ಕ್ರಿಕೆಟ್ ಮ್ಯಾಚ್ ನೋಡಿ ನಡೆದುಕೊಂಡು ಹೋಗುತ್ತಿದ್ದರು. ಆರ್ಸಿಬಿ ಗೆಲುವಿನ ಹಿನ್ನಲೆ ರಾಗಿಗುಡ್ಡದಲ್ಲಿ ಮಕ್ಕಳು ಪಟಾಕಿ ಹೊಡೆಯುತ್ತಿದ್ದರು. ಆಗ ಯುವಕರ ಗುಂಪೊಂದು ಮಕ್ಕಳಿಗೆ ತೊಂದರೆ ಕೊಡುತ್ತಿದ್ದರು. ಇದನ್ನು ಕಂಡ ಗಣೇಶ್ ಹಾಗೂ ಅವರ ಸ್ನೇಹಿತ ತೊಂದರೆ ಕೊಡಬೇಡಿ ಎಂದಿದ್ದಾರೆ. ಇದರಿಂದ ಕೆರಳಿದ ಯುವಕರ ಗುಂಪು ಗಣೇಶ್ ಮತ್ತು ಆತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಆರೋಪಿಸಲಾಗಿದೆ.

ಸ್ಥಳದಲ್ಲಿದ್ದವರು ಗಲಾಟೆ ಬಿಡಿಸಿದ್ದಾರೆ. ಆಗ ಅಲ್ಲಿಗೆ ಬಂದ ಮತ್ತೊಬ್ಬ ಯುವಕ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
