ಶಿವಮೊಗ್ಗ: ಖಾಸಗಿ ಶಾಲೆಗಳು ಕಾನೂನುಬಾಹಿರವಾಗಿ ನಡೆಸುತ್ತಿರುವ ಡೊನೇಷನ್ ದಂಧೆ ಹಾಗೂ ಕಟ್ಟಡ ಶುಲ್ಕದ ಹೆಸರಿನ ಸುಲಿಗೆ ತಡೆಗಟ್ಟಲು ವಿಶೇಷ ತನಿಖಾ ದಳ ರಚಿಸಬೇಕು ಮತ್ತು ದೂರು ಸಲ್ಲಿಸಲು ಸಹಾಯವಾಣಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ನ್ಯಾಯ ಮಂಡಳಿ (HRJC) ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
‘ಖಾಸಗಿ ಶಾಲೆಗಳು ಸರ್ಕಾರದ ನಿಯಮಾವಳಿಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಪ್ರವೇಶಾತಿ ಸಂದರ್ಭ ರಶೀದಿ ನೀಡದೆ ಲಕ್ಷಾಂತರ ರೂಪಾಯಿ ಡೊನೇಷನ್ ಪಡೆಯಲಾಗುತ್ತಿದೆ. ಕಟ್ಟಡ ಅಭಿವೃದ್ಧಿ, ಸ್ಮಾರ್ಟ್ ಕ್ಲಾಸ್, ಪಠ್ಯಪುಸ್ತಕ ಹಾಗೂ ಸಮವಸ್ತ್ರದ ಹೆಸರಿನಲ್ಲಿ ಬಡ ಮತ್ತು ಮಧ್ಯಮ ವರ್ಗದ ಪೋಷಕರನ್ನು ಸುಲಿಗೆ ಮಾಡಲಾಗುತ್ತಿದೆ’ ಎಂದು HRJC ಪ್ರಮುಖರು ಆರೋಪಿಸಿದರು.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪೋಷಕರನ್ನು ಒಗ್ಗೂಡಿಸಿ ಹೋರಾಟ ರೂಪಿಸುವುದಾಗಿ ಸಂಘಟನೆ ಎಚ್ಚರಿಸಿದೆ.

ಮಂಡಳಿಯ ರಾಜ್ಯ ಉಪಾಧ್ಯಕ್ಷ ಎನ್.ಎಂ. ಸಿಬ್ಗತ್ ಉಲ್ಲಾ, ಪದಾಧಿಕಾರಿಗಳಾದ ಲೋಕೇಶ್, ದೇವರಾಜ್ ಉಪಸ್ಥಿತರಿದ್ದರು.