ಭದ್ರಾವತಿ: ನಗರದ ಅನ್ವರ್ ಕಾಲೋನಿಯಲ್ಲಿ ಜೂನ್ 8ರಂದು ರೌಡಿಶೀಟರ್ ವಿಶ್ವ ಅಲಿಯಾಸ್ ಮುದ್ದೆ ಎಂಬಾತನ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಕೋರ್ಟ್ಗೆ ಯಾರೆಲ್ಲ ಶರಣಾಗಿದ್ದಾರೆ?
ಪ್ರಕಾಶ್ ಅಲಿಯಾಸ್ ಕರಾಟೆ, ಭರತ್ ಅಲಿಯಾಸ್ ಕೊಳಕ, ರಾಕೇಶ್ ಅಲಿಯಾಸ್ ಗೊಂಬೆ, ಆಲ್ವಿನ್ ಹಾಗೂ ಪ್ರಜ್ವಲ್ ನ್ಯಾಯಾಲಯಕ್ಕೆ ಶರಣಾದ ಆರೋಪಿಗಳು. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಓಲ್ಡ್ ಟೌನ್ ಠಾಣೆ ಪೊಲೀಸರು ಈಗಾಗಲೇ ಪ್ರಮೋದ್ ಅಲಿಯಾಸ್ ಗಾಂಧಿ ಮತ್ತು ಜಗದೀಶ್ ಎಂಬುವವರನ್ನು ಬಂಧಿಸಿದ್ದರು.

ಶರಣಾದ ಐವರು ಆರೋಪಿಗಳಿಗೆ ಜೆಎಂಎಫ್ಸಿ ನ್ಯಾಯಾಲಯವು ಒಂದು ವಾರದ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಗಳ ಶರಣಾದ ಹಿನ್ನೆಲೆ ಭದ್ರಾವತಿ ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಶ್ವನ ಮೇಲೆ ಮಾರಣಾಂತಿಕ ದಾಳಿ
ಜೂನ್ 8ರಂದು ಭದ್ರಾವತಿಯ ಅನ್ವರ್ ಕಾಲೋನಿಯ ಟೀ ಕ್ಯಾಂಟಿನ್ ಬಳಿ ರೌಡಿಶೀಟರ್ ವಿಶ್ವನಾಥ್ ಅಲಿಯಾಸ್ ಮುದ್ದೆ ಎಂಬಾತನ ಮೇಲೆ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿತ್ತು. ದಾಳಿಯಿಂದಾಗಿ ವಿಶ್ವನಾಥ್ ಕೈಗಳು ಮತ್ತು ಕಾಲು ತುಂಡಾಗುವಂತೆ ತೀವ್ರ ಗಾಯಗಳಾಗಿವೆ. ಸದ್ಯ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.