ನವದೆಹಲಿ: ಟೆಲಿಗ್ರಾಂ ಆ್ಯಪ್ನಲ್ಲಿ ಅತ್ಯಂತ ಆಘಾತಕಾರಿ ಮತ್ತು ಆಕ್ಷೇಪಾರ್ಹ ಮಾಹಿತಿ ಹರಿದಾಡುತ್ತಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ತನಿಖೆಗೆ ಸಹಕರಿಸದ ಹಿನ್ನೆಲೆ ಟೆಲಿಗ್ರಾಂ ಆ್ಯಪ್ ಅನ್ನು ದೇಶಾದ್ಯಂತ ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಇದನ್ನು ಪ್ರಶ್ನಿಸಿ ಟೆಲಿಗ್ರಾಂ ಆ್ಯಪ್ ದೆಹಲಿ ಹೈಕೋರ್ ಮೊರೆ ಹೋಗಿದೆ. ಈ ವೇಳೆ ಸರ್ಕಾರ ಆ್ಯಪ್ನಲ್ಲಿ ಆಘಾತಕಾರಿ ಮಾಹಿತಿ ಹರಿದಾಡುತ್ತಿದೆ ಎಂದು ತಿಳಿಸಿದೆ.

ಟೆಲಿಗ್ರಾಂಗೆ ಮೊದಲೇ ಎಚ್ಚರಿಸಿದ್ದೆವು
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಮೇ ತಿಂಗಳಿನಿಂದಲೇ ದೂರುಗಳು ಬರುತ್ತಿವೆ. ಅಲ್ಲದೆ, ಜೂನ್ 21ರ ಮರುಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವ ಜಾಲವೂ ಟೆಲಿಗ್ರಾಂನಲ್ಲಿ ಸಕ್ರಿಯವಾಗಿದೆ. ಈ ಬಗ್ಗೆ ಸಿಸ್ಟಮ್ ಸರಿಪಡಿಸಿಕೊಳ್ಳುವಂತೆ ಟೆಲಿಗ್ರಾಂಗೆ ಹಲವು ಬಾರಿ ಸೂಚಿಸಿದವು. ಆದರು ಅವರು ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
‘ಬಳಕೆದಾರರ ಹಕ್ಕು ಉಲ್ಲಂಘನೆʼ
ಇದಕ್ಕೂ ಮುನ್ನ ಟೆಲಿಗ್ರಾಂ ಪರ ವಾದ ಮಂಡಿಸಿದ ಹಿರಿಯ ವಕೀಲ ಧ್ರುವ್ ಮೆಹ್ತಾ, ಭಾರತದಲ್ಲಿ ಟೆಲಿಗ್ರಾಂಗೆ 15 ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ. ಕೇವಲ ಕೆಲವು ತಪ್ಪು ಖಾತೆಗಳ ಕಾರಣಕ್ಕಾಗಿ ಇಡೀ ಆ್ಯಪ್ ಅನ್ನು ನಿಷೇಧಿಸುವುದು ಸರಿಯಲ್ಲ. ಇದರಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಗತ್ಯ ಶೈಕ್ಷಣಿಕ ಮಾಹಿತಿ ಸಿಗದಂತಾಗಿದೆ. ಹಲವರ ವ್ಯಾಪಾರ ವಹಿವಾಟಿಗೂ ತೊಂದರೆಯಾಗಿದೆ. ಇದು ಸಂವಿಧಾನದ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಾದಿಸಿದರು.
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಾಲಯವು, ಕೇಂದ್ರ ಸರ್ಕಾರಕ್ಕೆ ತನ್ನ ವಾದದ ಪರವಾಗಿ ದಾಖಲೆಗಳನ್ನು ಸಲ್ಲಿಸಲು ಅನುಮತಿ ನೀಡಿ, ಮುಂದಿನ ವಿಚಾರಣೆಯನ್ನು ಗುರುವಾರ ಮಧ್ಯಾಹ್ನಕ್ಕೆ ಮುಂದೂಡಿದೆ.

