ತೀರ್ಥಹಳ್ಳಿ: ತಾಲ್ಲೂಕಿನ ಮಹಿಷಿ ಗ್ರಾಮದ ಶ್ರೀ ಸತ್ಯಸಂಧಗುರು ಉತ್ತರಾಧಿ ಮಠದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ ₹1.01 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗದ ಗಾಂಧೀನಗರ ನಿವಾಸಿ ರಾಘವೇಂದ್ರ ಆಚಾರ್ಯ (25) ಬಂಧಿತ ಆರೋಪಿ. ಜೂನ್ 17ರಂದು ಮಠದಲ್ಲಿದ್ದ ಸುಮಾರು 780 ಗ್ರಾಂ ತೂಕದ ಚಿನ್ನದ 16 ಹಲಗಾರತಿಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಶೇಷ ತಂಡದಿಂದ ಕಾರ್ಯಾಚರಣೆ
ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಜೂನ್ 17ರ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ ₹1,01,40,000 ಮೌಲ್ಯದ 16 ಚಿನ್ನದ ಹಲಗಾರತಿಗಳನ್ನು ಜಪ್ತಿ ಮಾಡಲಾಗಿದೆ.
ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಅರವಿಂದ ಕಲಗುಂಜಿ ಅವರ ಸೂಚನೆಯಂತೆ ತೀರ್ಥಹಳ್ಳಿ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಮಾಳೂರು ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ, ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಹಾಗೂ ಸಿಬ್ಬಂದಿ ಲಿಂಗೇಗೌಡ, ಸುರಕ್ಷಿತ್, ಕುಮಾರ್, ರವಿ, ಸುರೇಶ್ ನಾಯ್ಕ, ಸಂತೋಷ್ ಮತ್ತು ವಿನಯ್ ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
